ದಿ. ಕಮಲಾಕ್ಷಿ ಅಮ್ಮನವರಿಗೆ ನುಡಿನಮನ, ವೈಕುಂಠ ಸಮಾರಾಧನೆ

0

ಆದರ್ಶದ ಬಾಳ್ವೆ ಕಲಿಸಿದ ಅಮ್ಮ: ಡಾ.‌ ಆರ್.ಕೆ.ನಾಯರ್

ಇತ್ತೀಚೆಗೆ ಅಗಲಿದ ಜಾಲ್ಸೂರು ಎರ್ಮೆಕ್ಕಾರಿನ ದಿ. ಕಮಲಾಕ್ಷಿ ಅಮ್ಮನವರ ನುಡಿನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮವು ಇಂದು ಕೇರ್ಪಳದಲ್ಲಿರುವ ಬಂಟರ ಭವನದಲ್ಲಿ ನಡೆಯಿತು.

ತನ್ನ ತಾಯಿಗೆ ನುಡಿನಮನ ಸಲ್ಲಿಸಿದ ಕಮಲಾಕ್ಷಿ ಅಮ್ಮನವರ ಪುತ್ರ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್‌ರವರು ಮಾತನಾಡಿ, ಕಷ್ಟದ ಬಾಲ್ಯದಿಂದ ಬಂದು ಪರಿಶ್ರಮದಿಂದ ಬೆಳೆದು ನೆಮ್ಮದಿಯ ಮತ್ತು ಸಂತೃಪ್ತಿಯ ಬದುಕನ್ನು ಕಂಡ ಅಮ್ಮ ನಮ್ಮ ಎಲ್ಲಾ ಚಟುವಟಿಕೆಗಳಿಗೆ ಪ್ರೇರಣಾದಾಯಿಯಾದವರು. ಆದರ್ಶದ ಬಾಳ್ವೆ ಕಲಿಸಿದವರು. ನಮ್ಮ ಸಾಧನೆಗೆ ಸಂತೋಷಪಟ್ಟವರು. ಅವರ ಆದರ್ಶಯುತವಾದ ಬಾಳ್ವೆ ನಮಗೆಲ್ಲಾ ಮಾದರಿ. ಮುಂದೆಯೂ ಚೈತನ್ಯದಾಯಿನಿಯಾಗಿ ಅವರು ನಮ್ಮೊಡನಿರುತ್ತಾರೆ ಎಂದರು.

ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ನುಡಿನಮನ ಸಲ್ಲಿಸಿ, ವರ್ಷಗಳ ಸಾರ್ಥಕ ಜೀವನ ನಡೆಸಿದ ಸಾತ್ವಿಕ ಜೀವ ಕಮಲಾಕ್ಷಿ ಅಮ್ಮನವರು. ಕೇರಳದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬದುಕು ಕಂಡುಕೊಂಡ ಅವರು, ತಮ್ಮ ಮಕ್ಕಳ ಸಾಧನೆಗೆ ಸಂತೋಷಪಟ್ಟು ತುಂಬು ಬಾಳ್ವೆ ನಡೆಸಿ ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದರು.

ಪುತ್ರರಾದ ಬಾಲಚಂದ್ರ ನಾಯರ್, ಪಿತಾಂಬರ ನಾಯರ್, ಪುತ್ರಿಯರು,
ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪುಷ್ಪ ನಮನ ನಡೆಯಿತು.