ಹಿರಿಯ ವೈದ್ಯ ಡಾ.ಚಂದ್ರಶೇಖರ ಕಿರಿಭಾಗರಿಗೆ ‘ಗಾಂಧಿ ಸ್ಮೃತಿ ಪ್ರಶಸ್ತಿ’

0

ಅ.7 ರಂದು ಹರಿಹರಪಲ್ಲತಡ್ಕದಲ್ಲಿ ಪ್ರದಾನ

ಗಾಂಧಿ ಜಯಂತಿ ಪ್ರಯುಕ್ತ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ಸುಳ್ಯದ ಯುವಜನ ಸೇವಾ ಸಂಸ್ಥೆ ಕೊಡ ಮಾಡುವ ಗಾಂಧಿ ಸ್ಮೃತಿ ಪ್ರಶಸ್ತಿ ಗೆ ಖ್ಯಾತ ವೈದ್ಯ, ಹರಿಹರಪಲ್ಲತಡ್ಕದ ಡಾ.ಚಂದ್ರಶೇಖರ ಕಿರಿಭಾಗರು ಭಾಜನರಾಗಿದ್ದು, ಅ.7ರಂದು ಹರಿಹರಪಲ್ಲತಡ್ಕದ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸೆ.30 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಈ ವಿಷಯ ತಿಳಿಸಿದರು.

ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ ಮೀರಾ ಭಜನ್ ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕಿ‌ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ಅಭಿನಂಧನಾ ಮಾತುಗಳನ್ನಾಡುವರು. ಗಾಂಧಿ ಪ್ರತಿಪಾದನೆಯ ಮೌಲ್ಯಗಳ ವಿಚಾರದಲ್ಲಿ ಕಿಶೋರ್ ಕುಮಾರ್ ಕೂಜುಗೋಡು ಮಾತನಾಡಲಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಶಿಕ್ಷಕರು‌ ಭಾಗವಹಿಸಿ ವಿಧಾನ ಪರಿಷತ್ ಸದಸ್ಯ ‌ಎಸ್.ಎಲ್.ಭೋಜೇಗೌಡರೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟಕರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷರುಗಳಾದ ದಿನೇಶ್ ಮಡಪ್ಪಾಡಿ, ಶಂಕರ ಪೆರಾಜೆ, ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಕಾರ್ಯಕ್ರಮ ಉಸ್ತುವಾರಿ ದಿನೇಶ್ ಹಾಲೆಮಜಲು, ಯುವಜನ ಸೇವಾ ಸಂಸ್ಥೆ ಕಾರ್ಯದರ್ಶಿ ದಯಾನಂದ ಕೇರ್ಪಳ, ಮಂಡಳಿ ಉಪಾಧ್ಯಕ್ಷ ವಿಜಯಕುಮಾರ್ ಉಬರಡ್ಕ, ನಿರ್ದೇಶಜರುಗಳಾದ ವಿನುತಾ ಹರಿಶ್ಚಂದ್ರ ಪಾತಿಕಲ್ಲು, ಪ್ರಸಾದ್ ಕಾಟೂರು ಇದ್ದರು.