ಡಿ. 10: ಕೆಸರ್ ಟ್ ಒಂಜಿ ದಿನ, ಡಿ. 24: ಬಳ್ಪ-ಕೇನ್ಯ ಗ್ರಾಮೋತ್ಸವ, ಪೂರ್ವಭಾವಿ ಸಭೆ

0

ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಬಳ್ಪ ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬಳ್ಪ ಕೇನ್ಯ ಗ್ರಾಮಗಳ ಕೆಸರ್ ಟ್ ಒಂಜಿ ದಿನ ಕಾರ್ಯಕ್ರಮ ಡಿ. 10ರಂದು ಬೀದಿಗುಡ್ಡೆ ನಾರಾಯಣ ಮಣಿಯಾಣಿಯವರ ಗದ್ದೆಯಲ್ಲಿ ಮತ್ತು ಗ್ರಾಮೋತ್ಸವ ಡಿ. 24ರಂದು ಬಳ್ಪ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ನ. 20ರಂದು ಬಳ್ಪದ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಳೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಯಿತು. ಗ್ರಾಮೋತ್ಸವ ಸಮಿತಿ ಅಧ್ಯಕ್ಷ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ರೈ ಬಿರ್ಕಿ, ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಉಪಾಧ್ಯಕ್ಷೆ ಪಾರ್ವತಿ ಪಿ.ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ರವಿ ನರಿಯಂಗ ಸ್ವಾಗತಿಸಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ತಾರಾ ರೈ ಬಿರ್ಕಿ ವಂದಿಸಿದರು. ಬಳ್ಪ – ಕೇನ್ಯ ಗ್ರಾಮಗಳ ಗ್ರಾಮಸ್ಥರು ಸಭೆಗೆ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಿದರು.