ರೋಟರಿ ಕ್ಲಬ್ ಸುಳ್ಯ ಸಿಟಿ ಜೀವನ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಡಾ.ಚಂದ್ರಶೇಖರ ದಾಮ್ಲೆ ಆಯ್ಕೆ

0

ಮಾ.14ರಂದು ಗವರ್ನರ್‌ ಅಧಿಕೃತ ಭೇಟಿಯ ಸಂದರ್ಭ ಪ್ರಶಸ್ತಿ ಪ್ರದಾನ

ರೋಟರಿ ಕ್ಲಬ್ ಸುಳ್ಯ ಸಿಟಿ ಜೀವನ ಶ್ರೇಷ್ಠ ಸಾಧಕ ಪ್ರಶಸ್ತಿ – 2024ಕ್ಕೆ ಶಿಕ್ಷಣ ತಜ್ಞ, ಸಾಹಿತಿ, ಸಂಶೋಧಕ, ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿರುವ ಡಾ.ಚಂದ್ರಶೇಖರ ದಾಮ್ಲೆಯವರನ್ನು ಆಯ್ಕೆ ಮಾಡಲಾಗಿದೆ. ಮಾ.14ರಂದು ರೋಟರಿ ಕ್ಲಬ್ ಸುಳ್ಯ ಸಿಟಿಯ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ಗವರ್ನರ್ ಅಧಿಕೃತ ಭೇಟಿಯ ಸಂದರ್ಭ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೋಡು ತಿಳಿಸಿದ್ದಾರೆ.

ಮಾ.9ರಂದು‌ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ‌ನಡೆಸಿದ ಅವರು ಈ ವಿಷಯ ತಿಳಿಸಿದರು.

ಮಾ.14ರಂದು‌ ಬೆಳಗ್ಗೆ 10.30 ಕ್ಕೆ ಜಿಲ್ಲಾ ಗವರ್ನರ್ ಹೆಚ್.ಆರ್. ಕೇಶವರು ಸುಳ್ಯಕ್ಕೆ ಆಗಮಿಸಲಿದ್ದು, ಆಲೆಟ್ಟಿ ನಾರ್ಕೋಡು ಹಿರಿಯ ಪ್ರಾಥಮಿಕ ಶಾಲೆಗೆ ಕ್ಲಬ್ ವತಿಯಿಂದ ರೂ.3.50 ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಲಾದ ಶೌಚಾಲಯ ಕಟ್ಟಡದ ಹಸ್ತಾಂತರ ನಡೆಯುವುದು. ಹಾಗೂ ವಿದ್ಯಾರ್ಥಿಗಳಿಗೆ ರಕ್ತ ವರ್ಗೀಕರಣ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸಂಜೆ ಸುಳ್ಯ ರೋಟರಿ ಸಮುದಾಯ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ ದಾಮ್ಲೆಯವರಿಗೆ ರೋಟರಿ ಕ್ಲಬ್ ಸುಳ್ಯ ಸಿಟಿ ಜೀವನ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರದಾನ ನಡೆಯುವುದು. ಪತ್ರಕರ್ತ ಹಾಗೂ ಹಾಡುಗಾರ ಶಿವಪ್ರಸಾದ್ ಆಲೆಟ್ಟಿ, ಗಾಯಕಿ ಕು.ಸಾಹಿತ್ಯ, ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕ ಮಹಿಳೆಯೊಬ್ಬರನ್ನು ಗೌರವಿಸಲಾಗುವುದು ಎಂದು ವಿವರ ನೀಡಿದರು.

ಅಂಗನವಾಡಿ ಪುನಶ್ಚೇತನ ರೋಟರಿ ಜಿಲ್ಲಾ ಯೋಜನೆಯಡಿ ಬಾರ್ಪಣೆ ಅಂಗನವಾಡಿಗೆ ನೀರಿನ ಟ್ಯಾಂಕ್, ನಾಗಪಟ್ಟಣ ಅಂಗನವಾಡಿಗೆ ಚಯರ್ ಗಳು ಮತ್ತು ಆಲೆಟ್ಟಿ ಅಂಗನವಾಡಿ ಕೇಂದ್ರಕ್ಕೆ ಗೋಡೆ ಬರಹದ ಕೊಡುಗೆ ನೀಡಲಾಗುವುದು ಎಂದು‌ ಹೇಳಿದರು.

ಸಮಾರಂಭದಲ್ಲಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ಝೋನಲ್ ಲೆಫ್ಟಿನೆಂಟ್ ಸುಜಿತ್ ಪಿ.ಕೆ., ಗವರ್ನರ್ ಸ್ ಸ್ಪೆಷಲ್ ರೆಪ್ರೆಸೆಂಟೇಟಿವ್ ಡಾ.ಕೇಶವ ಪಿ.ಕೆ. ಭಾಗವಹಿಸುವರು ಎಂದು‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಯ ಮಾಜಿ ಅಧ್ಯಕ್ಷರುಗಳಾದ ಪ್ರಮೋದ್, ಮುರಳೀಧರ ರೈ, ನಿಯೋಜಿತ ಅಧ್ಯಕ್ಷ ಶಿವಪ್ರಸಾದ್ ಕೆ.ವಿ. ಇದ್ದರು.