ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ

0

ನಿವೃತ್ತ ನೌಕರರನ್ನು ಸೇವೆಗೆ ಬಳಸುವಂತಿಲ್ಲ

ಇಮೇಲ್ ಚಳವಳಿ ಆರಂಭಿಸುತ್ತೇವೆ

ಸುದ್ದಿಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಹೇಳಿಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ ಮಂಟಪ ನಿರ್ಮಾಣಕ್ಕೆ ನಿಗದಿ ಪಡಿಸಿದ ಸ್ಥಳವು ಸಂಪೂರ್ಣ ಅವೈಜ್ಞಾನಿಕವಾಗಿದೆ. ತಾಂಬೂಲ ಪ್ರಶ್ನಾ ಚಿಂತನೆ ನಡೆಸದೆ ಷಣ್ಮುಖ ಪ್ರಸಾದ ಬೋಜನ ಶಾಲೆಯ ಪಕ್ಕದಲ್ಲಿ ಧಾರ್ಮಿಕ ಕಟ್ಟಡ ಮಾಡಲು ಸ್ಥಳ ನಿಗದಿ ಮಾಡಿ ಗುದ್ದಲಿ ಪೂಜೆ ಮಾಡಿರುವುದು ಸರಿಯಲ್ಲ. ಅಲ್ಲದೆ ಇದೀಗ ನೀತಿ ಸಂಹಿತೆ ಇರುವಾಗ ದಾನಿಗಳ ಮೂಲಕ ನಿರ್ಮಿಸುವ ಆಶ್ಲೇಷ ಬಲಿ ಮಂಟಪ ನಿರ್ಮಾಣ ಕಾಮಗಾರಿ ಆರಂಭಿಸಲಾಗಿರುವುದು ಸಮರ್ಪಕವಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು. ಅಲ್ಲದೆ ಕ್ಷೇತ್ರದ ಭಕ್ತರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಟ್ಟು ಪ್ರಶ್ನಾ ಚಿಂತನೆ ನಡೆಸಿ ಆ ಮೂಲಕ ಕಂಡು ಬಂದ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.


ಸುಬ್ರಹ್ಮಣ್ಯದಲ್ಲಿ ಏ.4 ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನೀತಿ ಸಂಹಿತೆ ಇರುವ ಸಮಯ ಅಭಿವೃದ್ಧಿ ಕಾರ್ಯ ನಡೆಸಬಾರದು ಎಂಬ ನಿಯಮ ಇದೆ. ಈ ಬಗ್ಗೆ ದೇವಳದ ಆಡಳಿತಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಾದ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ದೂರನ್ನು ನೀಡಲಾಗಿದೆ. ಆಶ್ಲೇಷ ಬಲಿ ಮಂಟಪ ನಿರ್ಮಾಣಕ್ಕೆ ಮುಂದೆ ಬಂದ ದಾನಿಗಳು ನಿರ್ದಿಷ್ಠ ಪಕ್ಷಕ್ಕೆ ಸೇರಿದ್ದವರು.ಅಲ್ಲದೆ ಬಿಜೆಪಿ ಸರಕಾರ ಇರುವಾಗ ಸಚಿವರಾಗಿದ್ದವರು.ಆದುದರಿಂದ ಕಟ್ಟಡ ನಿರ್ಮಾಣ ಕಾರ್ಯವನ್ನು ನೀತಿ ಸಂಹಿತೆ ಮುಗಿಯುವ ತನಕ ಸ್ಥಗಿತಗೊಳಿಸಬೇಕು ಎಂದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಕಾಮಗಾರಿಗೆ ಒಳಗೊಂಡ ಷಣ್ಮುಖ ಪ್ರಸಾದ ಬೋಜನ ಶಾಲೆಯ ಪಕ್ಕದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿಲ್ಲ ಅಲ್ಲದೆ ಮಾಸ್ಟರ್ ಪ್ಲಾನ್ ಸಮಿತಿಯ ಸಭೆ ಕರೆಯದೆ ಏಕಾ ಏಕಿ ಕಾಮಗಾರಿ ನಡೆಸಲು ಆರಂಭಿಸಿರುವುದು ಅಪ್ರಸ್ತುತ. ಈ ಆಶ್ಲೇಷ ಬಲಿ ಮಂಟಪ ನಿರ್ಮಿಸುವ ಹತ್ತಿರ ಪಾಕ ಶಾಲೆಯ ಗ್ಯಾಸ್ ಸ್ಟಾಕ್ ಕೊಠಡಿ ಇದೆ ಇದು ಅಪಾಯಕಾರಿ. ಇದೀಗ ಚಿಕ್ಕದಾಗಿರುವ ಬೋಜನ ಶಾಲೆಯನ್ನು ವಿಸ್ತಾರ ಮಾಡಲು ಇದರಿಂದ ತೊಂದರೆ ಆಗುತ್ತದೆ ಎಂದು ಹರೀಶ್ ಇಂಜಾಡಿ ಹೇಳಿದರು.

ನಿವೃತ್ತರನ್ನು ಮಾವುತರಾಗಿ ನೇಮಿಸಿರುವುದು ಸರಿಯಲ್ಲ

ಶ್ರೀ ದೇವಳದ ಯಶಸ್ವಿ ಆನೆಯ ಮಾವುತರಾಗಿ ನಿವೃತ್ತರಾದ ಶ್ರೀನಿವಾಸ್ ಅನ್ನುವವರನ್ನು ಮತ್ತೆ ಮಾವುತರಾಗಿ ತೆಗೆದುಕೊಳ್ಳಲಾಗಿದೆ. ಅನುನುಭವಿಯಾಗಿರುವ ಕೊಠಡಿ ಹುಡುಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವಳದ ಸಿಬ್ಬಂದಿಯನ್ನು ಮಾವುತನಾಗಿ ನಿಯುಕ್ತಿಗೊಳಿಸಲಾಗಿದೆ ಇದು ಸಮರ್ಪಕವಲ್ಲ.ಈ ಹಿಂದೆ ಯಶಸ್ವಿಗೆ ಮಾವುತನಾಗಿ ಅನುಭವ ಹೊಂದಿರುವ ಶಿವ ಕುಮಾರ್ ಎ.ವಿ ಎಂಬ ದೇವಳದ ಸಿಬ್ಬಂಧಿಯನ್ನು ಕ್ಷುಲ್ಲುಕ ಕಾರಣ ನೀಡಿ ಮಾವುತನ ಕರ್ತವ್ಯದಿಂದ ತೆಗೆದು ಹಾಕಿ ಅವರನ್ನು ಭದ್ರತಾ ಕರ್ತವ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ. ಆದುದರಿಂದ ಶೀಘ್ರವೇ ಶಿವಕುಮಾರ್ ಅವರನ್ನು ಮಾವುತನನ್ನಾಗಿ ನೇಮಿಸಬೇಕು ನಿವೃತ್ತರಾದ ಶ್ರೀನಿವಾಸ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ನಿವೃತ್ತ ನೌಕರರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್ ಆಗ್ರಹಿಸಿದರು.

ಅವ್ಯವಸ್ಥೆ ಸಮರ್ಪಕತೆಗೆ ಇಮೈಲ್ ಚಳವಳಿ

ಶ್ರೀ ದೇವಳದಿಂದ ವಾಲಗದಕೇರಿ ಸಮೀಪ ನಿರ್ಮಿಸಿರುವ ಒಳಚರಂಡಿ ಘಟಕವು ಸಮರ್ಪಕವಾಗಿಲ್ಲ.ಈ ಘಟಕದ ಅವ್ಯವಸ್ಥೆಯಿಂದ ಈ ಭಾಗದಲ್ಲಿ ದುರ್ನಾತ ಬೀರುತ್ತಿದ್ದು ಇಲ್ಲಿನ ನಿವಾಸಿಗಳು ಸಂಕಷ್ಠ ಅನುಭವಿಸುತ್ತಿದ್ದಾರೆ. ಒಳಚರಂಡಿ ಘಟಕದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸುವ ವ್ಯವಸ್ಥೆ ಸರಿಯಾಗಬೇಕು. ಅಲ್ಲದೆ ಕ್ಷೇತ್ರದಲ್ಲಿ ನಿರ್ಮಿಸಿರುವ ಒಳಚರಂಡಿ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿದ್ದು, ಪ್ರತಿನಿತ್ಯ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ದೇವರಗದ್ದೆ ಹೋಗುವ ರಸ್ತೆಯಲ್ಲಿ ಮ್ಯಾನ್ ಹೋಲ್ ಅನ್ನು ರಸ್ತೆಯಲ್ಲೆ ತೆರೆದು ಇರಿಸಲಾಗಿದೆ.ಇದು ಅಪಾಯಕಾರಿಯಾಗಿದ್ದು ಇದಕ್ಕೆ ಬಿದ್ದರೆ ದೊಡ್ಡ ಅನಾಹುತ ಸಂಭವಿಸಲಿದೆ.ಆದುದರಿಂದ ಸಂಬಂಧಪಟ್ಟವರು ಶೀಘ್ರ ಇದನ್ನು ಸಮರ್ಪಕಗೊಳಿಸಬೇಕು ತಪ್ಪಿದ್ದಲ್ಲಿ ಪ್ರತಿಭಟನೆ ಮಾಡಲಾಗುದು.ಅಲ್ಲದೆ ಈ ಎಲ್ಲಾ ವಿಚಾರಗಳ ಬಗ್ಗೆ ಏ.6 ರಿಂದ ಇಮೈಲ್ ಚಳವಳಿ ನಡೆಸುತ್ತೇವೆ. ಮುಖ್ಯಮಂತ್ರಿಗಳಿಗೆ, ಮುಜರಾಯಿ ಸಚಿವರಿಗೆ, ಮುಜರಾಯಿ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದವರಿಗೆ ಸಮಸ್ಯೆಯ ಬಗ್ಗೆ ನಿರಂತರವಾಗಿ ಇ ಮೈಲ್ ಕಳಿಸುವ ಮೂಲಕ ಚಳವಳಿ ನಡೆಸಲಿದ್ದೇವೆ ಎಂದು ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಸಮಿತಿಯ ಮಾಜಿ ಸದಸ್ಯ ಶಿವರಾಮ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಾಧವ.ಡಿ, ಪಕ್ಷದ ಪ್ರಮುಖರಾದ ಬಾಲಕೃಷ್ಣ ಮರೀಲ್, ರವೀಂದ್ರ ಕುಮಾರ್ ರುದ್ರಪಾದ, ಎ.ಸುಬ್ರಹ್ಮಣ್ಯ ರಾವ್, ಭಾರತಿ, ಶೇಷಕುಮಾರ್ ಶೆಟ್ಟಿ, ಭರತ್ ಕಲ್ಲಗುಡ್ಡೆ ಉಪಸ್ಥಿತರಿದ್ದರು.