ಸುಳ್ಯದ ಎನ್ನೆಂಸಿಯಲ್ಲಿ ಆರಂಭಗೊಳ್ಳಲಿದೆ ಏವಿಯೇಷನ್ ಸರ್ಟಿಫಿಕೇಟ್ ಕೋರ್ಸ್

0

ಶಿಕ್ಷಕ ರಕ್ಷಕ ಸಭೆ ಮತ್ತು ಮಾಹಿತಿ ಕಾರ್ಯಗಾರ

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ಏವಿಯೇಷನ್ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸುವ ವಿಚಾರದ ಕುರಿತಾಗಿ ಶಿಕ್ಷಕ ರಕ್ಷಕ ಸಭೆ ಮತ್ತು ಮಾಹಿತಿ ಕಾರ್ಯಗಾರವನ್ನು ಮೇ 11 ಶನಿವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಚಿನ್ನಪ್ಪ ಗೌಡ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರಿನ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಕೆರಿಯರ್ ಡೆಸ್ಟಿನಿ (career destiny) ಮಂಗಳೂರು ಇದರ ಸಂಯೋಜಕರಾದ ಶ್ರೀಮತಿ ಜಯಶ್ರೀ ಹಾಗೂ ಸಂಸ್ಥೆಯ ತರಬೇತುದಾರರಾದ ದೇವಿಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏವಿಯೇಷನ್ ಕೋರ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಪದವಿ ಶಿಕ್ಷಣದ ನಂತರ ಏವಿಯೇಷನ್ ಕೋರ್ಸ್ ಮಾಡಿಕೊಂಡಲ್ಲಿ ವಿಮಾನಯಾನ ಸಂಸ್ಥೆಗಳಲ್ಲಿ ಇರುವ ವಿಫುಲ ಉದ್ಯೋಗ ಅವಕಾಶಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು. ನಂತರ ಕೆರಿಯರ್ ಡೆಸ್ಟಿನಿ ಸಂಸ್ಥೆಯಲ್ಲಿ ತರಬೇತಿ ಪಡೆದು ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯೊಂದರಲ್ಲಿ ಏರ್ ಹೋಸ್ಟೆಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೈಶಾಲಿ ಮಾತಾನಾಡಿ ತಮ್ಮ ಸಕ್ಸಸ್ ಸ್ಟೋರಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರುದ್ರಕುಮಾರ್ ಎಂ ಎಂ ಮಾತನಾಡಿ “ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶವನ್ನು ಕಲ್ಪಿಸುವ ಸಲುವಾಗಿ ನಮ್ಮ ಸಂಸ್ಥೆಯಲ್ಲಿ(ಎನ್ನೆಂಸಿ) ಹೊಸದಾಗಿ ಏವಿಯೇಷನ್ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸುತ್ತಿದ್ದೇವೆ. ಎಲ್ಲಾ ಪದವಿಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ” ಎಂದು ತಿಳಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ.ಮಮತ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀಧರ ವಿ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ವಿಷ್ಣುಪ್ರಶಾಂತ್ ವಂದಸಿದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ಆಸಕ್ತರು ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನೆಹರೂ ಮೆಮೋರಿಯಲ್ ಕಾಲೇಜಿನ ಕಚೇರಿ (08257230331, 08257233331) ಸಂಖ್ಯೆಗಳನ್ನು ಸಂಪರ್ಕಿಸಬಹುದು.