ಅರಂತೋಡು: ರಸ್ತೆಗೆ ಮರ ಬಿದ್ದು ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತ

0

ಅರಂತೋಡು ಗ್ರಾಮದ ಎಲ್ಪಕಜೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಮರವೊಂದು ಬಿದ್ದು ಸುಮಾರು ಎರಡು ಗಂಟೆಗಳ ಕಾಲ ಸಂಚಾರಕ್ಕೆ ಅಡೆಚಣೆಯಾದ ಘಟನೆ ಜೂ.26ರಂದು ಬೆಳಗ್ಗಿನ ಜಾವ ವರದಿಯಾಗಿದೆ.


ಬೆಳಗ್ಗಿನ ಜಾವ ಮೂರು ಗಂಟೆ ವೇಳೆಗೆ ಮಳೆಗೆ ರಸ್ತೆ ಬದಿಯಲ್ಲಿದ್ದ ಮರ ಮುಖ್ಯರಸ್ತೆಗೆ ಬಿದ್ದಿದ್ದು, ಶಬ್ದ ಕೇಳಿ ಸಮೀಪದ ಮನೆಯ ಜನಾರ್ಧನ ಎಂಬವರು ಎಚ್ಚರಗೊಂಡಿದ್ದು, ಬಳಿಕ ಅವರು ಅಕ್ಕಪಕ್ಕದ ವಿನಯ್, ತಾಜುದ್ದೀನ್ ಮತ್ತಿತರರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರೆನ್ನಲಾಗಿದೆ.

‌ಬಳಿಕ ಜನಾರ್ದನರು ಅರಂತೋಡಿನ ಪ್ರಕೃತಿ ವಿಕೋಪ ಸಹಾಯವಾಣಿಗೂ ಕರೆ ಮಾಡಿದ್ದು, ತದನಂತರ ಅರಂತೋಡಿನ ಸೋಮಶೇಖರ ಪೈಕ ಅವರ ಕ್ರೈನ್ ಮೂಲಕ ಮರವನ್ನು ಬದಿಗೆ ಸರಿಸಲಾಯಿತೆಂದು ತಿಳಿದುಬಂದಿದೆ.

ಮರ ಬಿದ್ದು ರಸ್ತೆಯ ಎರಡೂ ಕಡೆಗಳಲ್ಲಿ ವಾಹ‌ನ ಸಂಚಾರಕ್ಕೆ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಕೆಲ ವಾಹನ ಚಾಲಕರು ಹಗ್ಗವನ್ನು ಮರಕ್ಕೆ ಕಟ್ಟಿ ಪಿಕಪ್ ವಾಹನದ ಮೂಲಕ ಮರವನ್ನು ಬದಿಗೆ ಸರಿಸಲು ಪ್ರಯತ್ನಿಸಿದರೆಂದು ತಿಳಿದುಬಂದಿದೆ.
ಸುರಿಯುವ ವಿಪರೀತ ಮಳೆಯ ಮಧ್ಯೆ ಮರವನ್ನು ಮುಖ್ಯರಸ್ತೆಯಿಂದ ಬದಿಗೆ ಸರಿಸುವ ಕಾರ್ಯಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಿನಯ್ ಎಲ್ಪಕಜೆ , ಸೋಮಶೇಖರ ಪೈಕ, ಶಿವಪ್ರಸಾದ್ ಎಲ್ಪಕಜೆ, ದೀಪಕ್ ಪೈಕ ,ತಾಜುದ್ದೀನ್ ಅರಂತೋಡು ಹಾಗೂ ವಾಹನ ಚಾಲಕರು ಸಹಕರಿಸಿದರು.