ಕೆವಿಜಿ ಪಾಲಿಟೆಕ್ನಿಕ್: ವಿದ್ಯಾರ್ಥಿ ಪರಿಷತ್ ಉದ್ಘಾಟನೆ

0

ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘಗಳು ಅಡಿಗಲ್ಲು : ಡಾ. ಉಜ್ವಲ್ ಯು.ಜೆ.

ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಮೂಹ ಮತ್ತು ಸಂಸ್ಥೆಯ ಸಂಪರ್ಕ ಸೇತುವಾಗಿ ಕೆಲಸ ನಿರ್ವಹಿಸಬೇಕು: ಡಾ. ಸುರೇಶ್ ವಿ.

ಶೈಕ್ಷಣಿಕ ಉನ್ನತಿಗೆ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳು ಅಡಿಗಲ್ಲು, ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಬೆಳೆಸಲು ವಿದ್ಯಾರ್ಥಿ ಪರಿಷತ್ತು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(ರಿ.) ಕಮಿಟಿ “ಬಿ” ಯ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಉಜ್ವಲ್ ಯು. ಜೆ ಹೇಳಿದರು.
ಅವರು ಸುಳ್ಯದ ಅಮರಶ್ರೀ ಭಾಗ್ ನ ಜಾನಕಿ ವೆಂಕಟರಮಣ ಸಭಾಭವನದಲ್ಲಿ ನಡೆದ ಕೆ.ವಿ.ಜಿ. ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವಿದ್ಯಾರ್ಥಿ ಪರಿಷತ್ ಸಾಮಾಜಿಕ ಜವಾಬ್ದಾರಿ ಅರಿತು ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಸಂಸ್ಥೆಗಳ ಉನ್ನತಿಗಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲ ಡಾ. ಸುರೇಶ್ ವಿ .
ಮಾತನಾಡಿ ವಿದ್ಯಾರ್ಥಿ ಸಮೂಹ ಮತ್ತು ಸಂಸ್ಥೆಯ ಸಂಪರ್ಕ ಸೇತುವಾಗಿ ವಿದ್ಯಾರ್ಥಿ ಪರಿಷತ್ತು ಕಾರ್ಯನಿರ್ವಹಿಸಬೇಕು, ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ನ್ಯಾಯ ಒದಗಿಸಲು ಸಹಕರಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿದ್ಯಾರ್ಥಿ ಪರಿಷತ್ತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.


ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ರಂಗಸ್ವಾಮಿ ಪರಿಷತ್ತಿನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಯಶ್ವಿನ್ ಎಲ್ಲರ ಸಹಕಾರ ಕೋರಿದರು. ಕಾಲೇಜಿನ ಉಪಪ್ರಾಂಶುಪಾಲ ಅಣ್ಣಯ್ಯಕೆ. ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರಜ್ಞಾ ಕೆ.ಆರ್, ಮತ್ತು ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕು. ಸಂದ್ಯಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಧನುಷ್ ಎ ಸ್ವಾಗತಿಸಿ ಜೊತೆ ಕಾರ್ಯದರ್ಶಿ ದೀಕ್ಷಿತಾ ವಂದಿಸಿದರು.ಸುನಿಲ್ ಕುಮಾರ್ ಎನ್‌.ಪಿ ಸಂದೇಶ ವಾಚಿಸಿದರು. ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರೂಪಿಸಿದರು.