ಸುಳ್ಯದ ಸ್ನೇಹದಲ್ಲಿ ಬಾಹ್ಯಾಕಾಶ ದಿನಾಚರಣೆ

0

“ಬಾಹ್ಯಾಕಾಶ ಸಂಶೋಧನೆಯು ಯಾವಾಗಲೂ ಮಾನವನ ಕುತೂಹಲ ಮತ್ತು ಜಾಣ್ಮೆಗೆ ಸಾಕ್ಷಿಯಾಗಿದೆ.

ಚಂದ್ರನ ಮೇಲೆ ಮಾನವ ಇಟ್ಟ ಮೊದಲ ಹೆಜ್ಜೆಗಳು ಬ್ರಹ್ಮಾಂಡವನ್ನು ಅನ್ವೇಷಿಸುವ ಮಾನವರ ಹುಡುಕಾಟವು ವಿಕಾಸ ಗೊಳ್ಳುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಡೆಸಿದ ಚಂದ್ರಯಾನ -3 ಭಾರತದ ಯಶಸ್ವಿ ಚಂದ್ರಯಾನವಾಗಿದೆ. ಈಗಾಗಲೇ ಯು.ಎಸ್.ಎ, ರಷ್ಯಾ ಮತ್ತು ಚೀನಾ ಇವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ರಾಷ್ಟ್ರಗಳಾಗಿದ್ದು ಭಾರತ ನಾಲ್ಕನೇ ದೇಶವಾಗಿದೆ.

ಚಂದ್ರಯಾನ-3 ಕೈಗೊಂಡು ಯಶಸ್ವಿಯಾದ ಫಲವಾಗಿ ಅಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ” ಎಂದು ವಿಜ್ಞಾನ ಶಿಕ್ಷಕಿ ಶ್ರೀಮತಿ ಪ್ರತಿಮಾಕುಮಾರಿ ಕೆ.ಎಸ್. ಇವರು ಆ.23 ರಂದು ಬಾಹ್ಯಾಕಾಶ ದಿನಾಚರಣೆಯ ಅಂಗವಾಗಿ ಸುಳ್ಯದ ಸ್ನೇಹ ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಮಾತನಾಡಿ “ಸೋಲೆ ಗೆಲುವಿನ ಸೋಪಾನ. ವಿಜ್ಞಾನಿಗಳು ಕೆಲಸ ಮಾಡುವುದೇ ಈ ತತ್ವದ ಮೇಲೆ. ನಮ್ಮ ಶಾಲೆಯಲ್ಲಿರುವ ವಿಜ್ಞಾನ ಪ್ರಯೋಗಲಯವನ್ನು ಉಪಯೋಗಿಸಿಕೊಂಡು ಉತ್ಸಾಹಭರಿತವಾಗಿ ಕಲಿಯಬೇಕು. ಕಲಿಕೆಯಲ್ಲಿ ನಿರಂತರತೆ ಇದ್ದಾಗ ಯಶಸ್ಸನ್ನು ಸಾಧಿಸಲು ಸಾಧ್ಯ” ಎಂದರು.


ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿ ವೈಶಾಲಿ ಸ್ವಾಗತಿಸಿ, ಚೈತನ್ಯ ವಂದಿಸಿ ಮತ್ತು ವಿದ್ಯಾರ್ಥಿನಿ ಚರಿತ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ, ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಚಂದ್ರಯಾನ 3ರ ವೀಡಿಯೋ ತೋರಿಸಲಾಯಿತು.