ಕಾಂತಮಂಗಲ – ಹನಿಯಡ್ಕ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬ ಅಳವಡಿಕೆಗೆ ಆಕ್ಷೇಪ : ಕಾಮಗಾರಿ ಸ್ಥಗಿತ

0

ಅಜ್ಜಾವರ ಗ್ರಾಮ ಕಾಂತಮಂಗಲದ ಹನಿಯಡ್ಕ ಭಾಗದಲ್ಲಿ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಾಮಗಾರಿಯು ನಡೆಯುತ್ತಿದ್ದು ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ಕಂಬ ಅಳವಡಿಸಿದರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾದ ಘಟನೆ ವರದಿಯಾಗಿದೆ.

ಸುಳ್ಯ‌ನಗರ ವ್ಯಾಪ್ತಿಯಿಂದ ಕಾಂತಮಂಗಲಕ್ಕೆ ವಿದ್ಯುತ್ ಲೈನ್ ಎಳೆಯಲಾಗುತ್ತಿದ್ದು ಕಂಬಗಳನ್ನು ರಸ್ತೆಯ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು‌ ಕಂಬ ಅಳವಡಿಸಲಾಗುತ್ತಿದೆ. ಇದರಿಂದ ಸಮಸ್ಯೆಯಾದೀತು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಂಬ ಅಳವಡಿಕೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದರಲ್ಲದೆ, ಮೆಸ್ಕಾಂ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರು.

ಸ್ಥಳಕ್ಕೆ ಬಂದ ಮೆಸ್ಕಾಂ ಅಧಿಕಾರಿಗಳು ಜನರ ಆಕ್ಷೇಪದ ಮೇರೆಗೆ ಕೆಲಸ ಸ್ಥಗಿತಗೊಳಿಸುವಂತೆ ಹೇಳಿದರೆಂದು ತಿಳಿದುಬಂದಿದೆ.

ರಸ್ತೆಯ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಗಳು ಅಳವಡಿಕೆಯಾಗಿದೆ. ವಿದ್ಯುತ್ ಕಂಬ ಅಳವಡಿಸಿದರೆ ಸಮಸ್ಯೆ ಯಾಗುತ್ತದೆ. ಕಂಬ ಅಳವಡಿಕೆಗೆ ನಮ್ಮ ಆಕ್ಷೇಪವಲ್ಲ. ಆದರೆ ಜನರಿಗೆ ತೊಂದರೆಯಾಗುವಂತೆ ಅಳವಡಿಕೆ ಸರಿಯಲ್ಲ ಎಂದು ಸ್ಥಳೀಯರು ಸುದ್ದಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸತೀಶ್ ಬೂಡುಮಕ್ಕಿ, ಸತೀಶ್ ಅತ್ಯಡ್ಕ, ಮಂಜುನಾಥ್ ಕಾತಮಂಗಲ,ಕುಶಲ ಹನಿಯಡ್ಕ , ಸುಬ್ಬಯ್ಯ ಬಸವನಪಾದೆ, ಶರತ್ ಅತ್ಯಡ್ಕ, ಚಿದಾನಂದ ಬಸವನಪಾದೆ, ಪರಮೇಶ್ವರ್ ಬಸವನಪಾದೆ , ತಾರಾನಾಥ ಅತ್ಯಡ್ಕ, ದಿವಾಕರ ಹನಿಯಡ್ಕ,ಉದಯ ಬಸವನಪಾದೆ ಮೊದಲಾದವರಿದ್ದರು.