ಸ್ನೇಹದಂತಹ ಇನ್ನೊಂದು ಶಾಲೆ ಇಲ್ಲ

0

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಬಿಳಿಮಲೆ ಮೆಚ್ಚುಗೆ

“ಪ್ರಸ್ತುತವಾಗಿ 45,000 ಕನ್ನಡ ಶಾಲೆಗಳು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿವೆ. ಯಾಕೆಂದರೆ ಹೆಚ್ಚಿನ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಕಲಿಯುತ್ತಿದ್ದಾರೆ. ಹಾಗೆಯೇ ಕನ್ನಡ ಓದಿದರೆ ಕೀಳು, ಕೆಲಸ ದೊರೆಯುವುದಿಲ್ಲ. ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಸಿಗುತ್ತದೆ ಎಂಬ ಭಾವನೆ ಎಲ್ಲರಲ್ಲೂ
ಬೆಳೆದು ಬಿಟ್ಟಿದೆ. ಇದು ಸರಿಯಲ್ಲ. ಕನ್ನಡ ಕಲಿತೇ ಸಾಕಷ್ಟು ಉನ್ನತ ಸ್ಥಾನಗಳಿಗೆ ಹೋದವರು ಅನೇಕರಿದ್ದಾರೆ. ಹಾಗಾಗಿ ನಮ್ಮ ಮಕ್ಕಳಿಗೆ 5ನೇ ತರಗತಿಯವರೆಗೆ ರಾಜ್ಯ ಭಾಷೆಯಲ್ಲೇ ಪಾಠ ಮಾಡಬೇಕು. ಯಾಕೆಂದರೆ ಗೊತ್ತಿರುವ ಭಾಷೆಯಲ್ಲಿ ಕಲಿತಾಗ ವಿಷಯಗಳು ಬಹಳ ವೇಗವಾಗಿ ಅರ್ಥವಾಗುತ್ತದೆ. ಯಾವುದೇ ಭಾಷೆ ಕಲಿತರೂ ತಾಯಿನುಡಿಯನ್ನು ಕಲಿಯಿರಿ,ಅದನ್ನು ಮರೆಯಬೇಡಿ. ಖಾಸಗೀ ಶಾಲೆ ಪ್ರಾರಂಭಿಸಿ, ಡಾ. ದಾಮ್ಲೆ ಯವರು ಅನೇಕ ಕಲಿಯುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲೇ ಕನ್ನಡ ಮತ್ತು ಇಂಗ್ಲಿಷನ್ನೂ ಚೆನ್ನಾಗಿ ಹೇಳಿ ಕೊಡುವ ಶಾಲೆ ಇದ್ದರೆ ಅದು ಸ್ನೇಹಶಾಲೆ. ಸ್ನೇಹದಂತೆ ಇನ್ನೊಂದು ಶಾಲೆ ಇಲ್ಲ ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಅವರು ಸೆ.3ರಂದು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನುದ್ದೇಶಿಸಿ ಮಾತನಾಡಿದರು. ಆರಂಭದಲ್ಲಿ ಡಾ. ಬಿಳಿಮಲೆ ಯವರನ್ನು ಶಾಲು ಹೊದೆಸಿ ಹಾರ ಹಾಕಿ ಸನ್ಮಾನಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ನೇಹ ಶಿಕ್ಷಣ   ಅಧ್ಯಕ್ಷ ರಾಗಿರುವ ಡಾ| ಚಂದ್ರಶೇಖರ ದಾಮ್ಲೆ ಯವರು ಮಾತನಾಡಿ "ನಮ್ಮ ಶಾಲೆ ಕನ್ನಡ ಮಾಧ್ಯಮ ಶಾಲೆ. ಕನ್ನಡ ಮಾಧ್ಯಮವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಕನ್ನಡದ ಮೇಲಿರುವ ಪ್ರೀತಿ ಹಾಗೂ ಜ್ಞಾನವನ್ನು ಅರ್ಥ ಮಾಡಿಕೊಂಡು ಕಲಿಯಬೇಕೆಂಬ ನೀತಿ. ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು  ಕಲಿಯುವುದು ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಸಾಧ್ಯ" ಎಂದರು.





 ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ  ಶ್ರೀ ಚಂದ್ರಶೇಖರ ಪೇರಾಲು ಹಾಗೂ ರಾಜ್ಯ ಅರೆ ಭಾಷೆ  ಅಕಾಡೆಮಿಯ ಅಧ್ಯಕ್ಷರಾಗಿರುವ  ಶ್ರೀ ಸದಾನಂದ ಮಾವಂಜೆ ಉಪಸ್ಥಿತರಿದ್ದರು.  ಸಾಹಿತ್ಯ ಪರಿಷತ್ ವತಿಯಿಂದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಚಿತ್ರಗಳನ್ನು ರಾಜ್ಯೋತ್ಸವದ ಪೂರ್ವಭಾವಿಯಾಗಿ ಅನಾವರಣಗೊಳಿಸಲಾಯಿತು.





   ಕಾರ್ಯಕ್ರಮದ  ಆರಂಭದಲ್ಲಿ ಶಿಕ್ಷಕ ದೇವಿಪ್ರಸಾದ  ಜಿ. ಸಿ. ಪಾಡ್ಡನ ಹೇಳುವ ಮೂಲಕ ಚಾಲನೆ  ನೀಡಿದರು.   ಸಂಸ್ಥೆಯ  ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗಾಯತ್ರಿ  ಬಿ.ಎಸ್ ವಂದಿಸಿದರು ಹಾಗೂ ಶಿಕ್ಷಕಿ ಶ್ರೀಮತಿ ಸವಿತಾ.ಎಂ. ನಿರೂಪಿಸಿದರು. ಈ ಸಂದರ್ಭದಲ್ಲಿ ಪೋಷಕರು , ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.