ಕೋಲ್ಚಾರು ರಸ್ತೆ ಡಾಮರೀಕರಣ ಕಾಮಗಾರಿ ಕಳಪೆ ಆರೋಪ- ನಾಗರಿಕರಿಂದ ಪ್ರತಿಭಟನೆ

0

ಕೋಲ್ಚಾರಿನಿಂದ ಕನ್ನಡಿತೋಡು ವರೆಗೆ
ಅಧಿಕಾರಿಗಳು ಸಮೇತ ಪರಿಶೀಲನೆಯ ಪಾದಯಾತ್ರೆ

ಆಲೆಟ್ಟಿ ಗ್ರಾಮದ ನಾರ್ಕೋಡು ಕೋಲ್ಚಾರು ಕನ್ನಡಿತೋಡು ಮೂಲಕ ಅಂತರ್ ರಾಜ್ಯ ಸಂಪರ್ಕದ ಮುಖ್ಯ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಕಳೆದ 4 ವರ್ಷಗಳ ಹಿಂದೆ ಶಾಸಕ ಎಸ್.ಅಂಗಾರ ರವರು ಕೋಲ್ಚಾರಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅನುದಾನ ರೂ. 10.5 ಕೋಟಿ ಬಿಡುಗಡೆಗೊಂಡು ಜೆ.ಡಿ.ಸುವರ್ಣ ಎಂಬ ಗುತ್ತಿಗೆದಾರರು ಕಾಮಗಾರಿ ಕೆಲಸ ಮಾಡುತ್ತಿದ್ದಾರೆ.


ರಸ್ತೆಅಗಲೀಕರಣದ ಅರ್ಥ್ ವರ್ಕ್ ಮುಗಿದು ಇದೀಗ ಅಂತಿಮ ಹಂತದ ಡಾಮರೀಕರಣ ಕೆಲಸ ನಡೆಯುತ್ತಿದ್ದು ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಾಗಿದೆ ಎಂದು ಆರೋಪಿಸಿ ಸ್ಥಳೀಯ ಊರಿನ ನಾಗರಿಕರು ಸೇರಿ ಪ್ರತಿಭಟನೆ ಕೈಗೊಂಡು ಪರಿಶೀಲನೆಯ ಪಾದಯಾತ್ರೆ ಮಾಡಿದ ಘಟನೆ ವರದಿಯಾಗಿದೆ.

ನಾರ್ಕೋಡಿನಿಂದ ಕನ್ನಡಿ ತೋಡಿನವರೆಗೆ ಕಳೆದ ವಾರವಷ್ಟೇ ಹಾಕಿರುವ ಡಾಮರೀಕರಣ ಅವೈಜ್ಞಾನಿಕವಾಗಿ ನಿರ್ವಹಿಸಿದ್ದು ಈಗಾಗಲೇ ಎದ್ದು ಹೋಗಿವೆ. ರಸ್ತೆಯ ಮಣ್ಣಿನ ಮೇಲೆ ಜಲ್ಲಿ ಹಾಕದೆ ಬರಿ ಕಳಪೆ ಗುಣ ಮಟ್ಟದ ಡಾಮರು ಮಾತ್ರ ಹಾಕಿದ್ದಾರೆ.
ಜಲ್ಲಿ ಹಾಕಿ ಸಮರ್ಪಕ ರೀತಿಯಲ್ಲಿ ಕೆಲಸ ನಿರ್ವಹಿಸದೆ ಕಳಪೆ ಗುಣ ಮಟ್ಟದ ಕಾಮಗಾರಿ ಕೆಲಸ ನಿರ್ವಹಿಸಿರುವುದನ್ನು ಮನಗಂಡ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಾಕಲಾರಂಭಿಸಿದರು. ಇದರ ಕುರಿತು ಸಾಧಕ ಬಾಧಕಗಳನ್ನು ಚರ್ಚಿಸಿ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಯಿತು. ದೊಡ್ಡ ಮೊತ್ತದ ಅನುದಾನವಿದ್ದರೂ ಈ ರೀತಿಯ ಕಾಮಗಾರಿ ನಿರ್ವಹಿಸಿ ಜನತೆಗೆ ಸಮಾಜಕ್ಕೆ ದ್ರೋಹ ಮಾಡುತ್ತಿರುವುದನ್ನು ಖಂಡಿಸುವುದಾಗಿ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರಲೇಬೇಕೆಂದು ಪ್ರತಿಭಟನಾ ನಿರತ ಸಾರ್ವಜನಿಕರು ಪಟ್ಟು ಹಿಡಿದರು. ಹಿಂದಿನ ದಿನ
ಅದೇ ರಸ್ತೆಯ ಮೂಲಕ ಸಚಿವ ಎಸ್ .ಅಂಗಾರ ರವರು ಕೇರಳದ ಕಡೆಗೆ ಸಂಚರಿಸುವಾಗ ಸ್ಥಳೀಯರು ವಿಷಯವನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇಂಜಿನಿಯರ್ ರವರಿಗೆ ದೂರವಾಣಿ ಮೂಲಕ ಪರಿಶೀಲನೆ ನಡೆಸುವಂತೆ ತಿಳಿಸಿದರು. ಅದರಂತೆ
ಇಂದು ಬೆಳಗ್ಗೆ ಕೋಲ್ಚಾರಿನಲ್ಲಿ ಬೆಳಗ್ಗೆ 10 ಗಂಟೆಯಿಂದ ನಾಗರಿಕರು ಜಮಾಯಿಸತೊಡಗಿದರು. ಬಳಿಕ ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ರವರು ದೂರವಾಣಿ ಮೂಲಕ ವಿಚಾರಿಸಿದರು‌. ಇದಕ್ಕೆ ಉತ್ತರಿಸಿದ ಇಂಜಿನಿಯರ್ ರವರು ಬರುವುದಾಗಿ ತಿಳಿಸಿದರು.
ಲೋಕೋಪಯೋಗಿ ಇಂಜಿನಿಯರ್ ಲೋಕೇಶ್ ಮತ್ತು ಪರಮೇಶ್ವರ್ ಹಾಗೂ ಗುತ್ತಿಗೆದಾರರ ಪೈಕಿ ಪೃಥ್ವಿ ಯವರನ್ನು ಕಳಪೆ ಕಾಮಗಾರಿ ಕುರಿತು ‌ಪ್ರತಿಭಟನಾ ನಿರತರು ತರಾಟೆಗೆತ್ತಿಕೊಂಡರು. ಡಾಮರೀಕರಣ ಮಾಡಿದ ರಸ್ತೆಯ ಗುಣ ಮಟ್ಟವನ್ನು ಪರಿಶೀಲಿಸುವಂತೆ ಆಗ್ರಹಿಸಿ ಕೋಲ್ಚಾರಿನಿಂದ ಕನ್ನಡಿತೋಡುವರೆಗೆ ಸುಮಾರು 6 ಕಿ.ಮೀ.ನಷ್ಟು ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು. ಇಂಜಿನಿಯರ್ ಲೋಕೇಶ್ ರವರು ಕಾಲು ನೋವು ಇದ್ದು ಅಸೌಖ್ಯವಿರುವ ಕಾರಣಕ್ಕಾಗಿ ಕಾರಿನಲ್ಲಿ ಬಂದರು. ಬಾಕಿ ಉಳಿದವರೆಲ್ಲರೂ ಪಾದಯಾತ್ರೆ ಮೂಲಕ ಸಾಗಿದರು. ಅಲ್ಲಲ್ಲಿ ಕಾಮಗಾರಿ ಕಳಪೆಯಾಗಿರುವುದನ್ನು ಊರವರು ಕೈಯಲ್ಲಿ ತೆಗೆದು ತೋರಿಸಿದರು. ಅಸರ್ಮಪಕ ಕಾಮಗಾರಿ ಆಗಿರುವುದನ್ನು ಪರಿಶೀಲನೆ ನಡೆಸಿದ ಇಂಜಿನಿಯರ್ ರವರು ಒಂದು ವಾರದೊಳಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸೂಚಿಸುತ್ತೇವೆ.ಕಾಮಗಾರಿ ಕಳಪೆಯಾಗಿರುವ ಎಲ್ಲಾ ಕಡೆಗಳಲ್ಲಿ ಮತ್ತೆ ಮರುಡಾಮರೀಕರಣ ಮಾಡಿಸುತ್ತೇವೆ ಎಂದು ಮಾಧ್ಯಮದವರೊಂದಿಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು ಸದ್ಯದ ಮಟ್ಟಿಗೆ ಇಂತಹ ಕಳಪೆ ಕಾಮಗಾರಿ ಮಾಡುವುದು ಬೇಡ. ಕಾಮಗಾರಿ ಕೆಲಸ ಮಾಡುತ್ತಿರುವ ಎಲ್ಲಾ ಯಂತ್ರೋಪಕರಣಗಳನ್ನು ಕೋಲ್ಚಾರಿನಲ್ಲಿ ತಂದು ಇರಿಸುವಂತೆ ಹೇಳಿದರು. ಮುಂದಿನ‌ ಫೆ.7 ರ ಮುಂಚಿತವಾಗಿ ಸಂಬಂಧ ಪಟ್ಟ ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ರೀತಿಯಲ್ಲಿ ಕಾಮಗಾರಿ ಕೆಲಸ ನಡೆಸುವಂತೆ ತಿಳಿಸಿದ ಬಳಿಕ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಲಿ ಎಂದು ಸ್ಥಳೀಯ ನಾಗರಿಕರು ಹೇಳಿದರು. ಇದಕ್ಕೆ ಒಪ್ಪಿದ ಇಂಜಿನಿಯರ್ ಲೋಕೇಶ್ ರವರು ಕೆಲಸದ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಂದಿನ ಒಂದು ವಾರದೊಳಗೆ ಗುತ್ತಿಗೆದಾರರನ್ನು ಕರೆಸಿ ಸಮರ್ಪಕ ಕಾಮಗಾರಿ ನಿರ್ವಹಿಸುವ ಬಗ್ಗೆ ತಿಳಿಸಲಾಗುವುದು ಎಂದು ಸಮಾಧಾನ ಪಡಿಸಿದರು.


ಇದರಿಂದ
ಸಮಾಧಾನಗೊಂಡ ನಾಗರಿಕರು ಭರವಸೆ ಮೇರೆಗೆ ಒಪ್ಪಿಕೊಂಡು ಪ್ರತಿಭಟನೆ ಹಿಂತೆಗೆದರು.
ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಇಂಜಿನಿಯರ್ ರವರು ತಡವಾಗಿ ಬಂದ ಕಾರಣಕ್ಕೆ ಅಧಿಕಾರಿ ಯವರನ್ನು ತರಾಟೆಗೆತ್ತಿಕೊಂಡರು. ಕಾಮಗಾರಿ ಇಷ್ಟು ವರ್ಷಗಳಿಂದ ನಡೆಯುತ್ತಿದೆ ನೀವು ಪರಿಶೀಲನೆಗೆ ಬರಲಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರಾದ ಪಂಚಾಯತ್ ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಮಾಜಿ ಉಪಾಧ್ಯಕ್ಷ ಹರೀಶ್ ಕೊಯಿಂಗಾಜೆ, ನ್ಯಾಯವಾದಿ ಸತೀಶ್ ಕುಂಭಕ್ಕೋಡು,ಪಂಚಾಯತ್ ಸದಸ್ಯೆ ಶಂಕರಿ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು, ಜಗದೀಶ್ ಕೂಳಿಯಡ್ಕ,
ಪ್ರಣೀತ್ ಕಣಕ್ಕೂರು, ಯಶಸ್ ಕೊಯಿಂಗಾಜೆ, ಪ್ರದೀಪ್ ಕೊಲ್ಲರಮೂಲೆ, ನೀಲಕಂಠ ಕೊಲ್ಲರಮೂಲೆ, ಚಿದಾನಂದ ಕೋಲ್ಚಾರು, ವಿನೋದ್ ಕೊಯಿಂಗಾಜೆ, ಮಣಿಕಂಠ ಹಾಸ್ಪಾರೆ, ಕಮಲಾಕ್ಷ ಕೊಯಿಂಗಾಜೆ, ಸಜೇಶ್ ಕೊಯಿಂಗಾಜೆ, ಲಕ್ಷ್ಮಣ ಕಣಕ್ಕೂರು, ಬಾಲಕೃಷ್ಣ ಕಣಕ್ಕೂರು, ಹರೀಶ್ ಕೋಲ್ಚಾರು, ಜಯರಾಜ್ ಕಣಕ್ಕೂರು, ಹೇಮಾವತಿ ಕುಡೆಂಬಿ, ಪುರುಷೋತ್ತಮ ಕುಂಭಕ್ಕೋಡು, ಮತ್ತಿತರರು ಭಾಗವಹಿಸಿದರು.