ವಿದ್ಯಾಮಾತಾ ಅಕಾಡೆಮಿ ಇದರ 2ನೆಯ ಶಾಖೆ ಕಾರ್ಕಳದಲ್ಲಿ ಶುಭಾರಂಭ

0

ನೂತನ ಶಾಖೆ ಉದ್ಘಾಟಿಸಿದ ವಜ್ರದೇಹಿ ಶ್ರೀಗಳು

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಿದ ವಿದ್ಯಾಮಾತಾ ಅಕಾಡೆಮಿ

ಸ್ಪರ್ಧಾತ್ಮಕತೆಯ ಕುರಿತು ಚಿಕ್ಕಂದಿನಿಂದಲೇ ಅರಿವು ಮೂಡಿಸುವುದು ಇಂದಿನ ಅಗತ್ಯ: ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ

ಪುತ್ತೂರು : ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ಎರಡನೇಯ ಶಾಖೆಯು ಏ.9 ರಂದು ಕಾರ್ಕಳದಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆ ಉದ್ಘಾಟಿಸಿ , ಆಶೀರ್ವಚನ ನೀಡಿದ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರನಂದ ಶ್ರೀಗಳು ಮಾತನಾಡಿ , ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕತೆಯ ಬಗ್ಗೆ ಯುವ ಜನತೆಯಲ್ಲಿ ಅರಿವನ್ನು ಮೂಡಿಸುವುದು ತೀರಾ ಅನಿವಾರ್ಯವಾಗಿದೆ. ಇಂತಹ ಅರಿವನ್ನು ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ಬೆಳೆಸಿಕೊಂಡರೆ , ಪ್ರತೀ ಇಲಾಖೆಗಳಲ್ಲೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನಾವೆಲ್ಲರೂ ಕಾಣಬಹುದಾಗಿದೆ.


ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿರುವ ವಿದ್ಯಾಮಾತಾ ಅಕಾಡೆಮಿ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ನುಡಿಯನ್ನಾಡಿದ ಶ್ರೀ ಗಳು ಸಂಸ್ಥೆಗೆ ಶುಭಾಶೀರ್ವಾದ ನೀಡಿ ,ಅಭಿವೃದ್ಧಿಗೆ ಹರಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮೃತ ಭಾರತಿ ಟ್ರಸ್ಟ್ ಇದರ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ , ಗ್ರಾಮೀಣ ಪ್ರದೇಶಗಳಿಂದ ಹಲವರನ್ನು ಅಧಿಕಾರಿಗಳಾನ್ನಾಗಿ ನೀಡಿದ ವಿದ್ಯಾಮಾತಾ ಅಕಾಡೆಮಿಯು ಉಡುಪಿ ಜಿಲ್ಲೆಗೂ ಕಾಲಿಟ್ಟದ್ದು ಅತೀ ಸಂತಸದ ಸಂಗತಿಯೆಂದು ಹರ್ಷ ವ್ಯಕ್ತಪಡಿಸಿದರು.
ಮತ್ತೊರ್ವ ಅತಿಥಿ ಉಜ್ವಲ್ ಗ್ರೂಪ್ ಇದರ ವ್ಯವಸ್ಥಾಪಕ ನಿರ್ದೇಶಕ ಅಜಯ್ ಶೆಟ್ಟಿ ಮಾತನಾಡಿ , ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆಯ ಕೌಶಲ್ಯ ಸಾಮರ್ಥ್ಯವೂ ಕೂಡ ಬಹಳ ಮುಖ್ಯ ಎಂಬುದನ್ನು ಈ ಸಂಸ್ಥೆ ಈಗಾಗಲೇ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಧಕರಿಗೆ ಸನ್ಮಾನ:

ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜ್ ಹಾಗೂ ಶ್ರೀ ವೆಂಕಟರಮಣ ಮಹಿಳಾ ಕಾಲೇಜ್ ಇಲ್ಲಿ ಒಟ್ಟು 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಪ್ರೊ.ಮಿತ್ರ ಪ್ರಭಾ ಹೆಗ್ಡೆ ಮತ್ತು ಶೈಕ್ಷಣಿಕ ಹಾಗೂ ಕನ್ನಡ ಸಾಹಿತ್ಯ ರಂಗದಲ್ಲಿ ಸೇವೆ ಸಲ್ಲಿಸಿದ ಜ್ಯೋತಿ ಗುರುಪ್ರಸಾದ್ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನೆಲೆಯಲ್ಲಿ ಮಾತನಾಡಿ ಸ್ವಾಗತಿಸಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಸಂಸ್ಥೆಯ ಏಳಿಗೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

ಏಪ್ರಿಲ್ 10 ರಿಂದ ವಿ.ಎ.ಓ ಮತ್ತು ಪಿ ಡಿ ಓ ನೇಮಕಾತಿಯ ಆನ್ಲೈನ್ ತರಬೇತಿಯು ಪ್ರಾರಂಭವಾಗಲಿದೆ ಎಂದು ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾಹಿತಿ ನೀಡಿದರು.

ವಿದ್ಯಾಮಾತಾ ಅಕಾಡೆಮಿಯ ಕಾರ್ಕಳ ಶಾಖೆಯ ಸಂಚಾಲಕರಾದ ಶ್ರೀಮತಿ ರಮಿತ ಶೈಲೇಂದ್ರ ರಾವ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿ ಅಭ್ಯಾಗತರನ್ನು ಅಭಿನಂದಿಸಿದರು, ಈ ವೇಳೆ ಸಂಸ್ಥೆಯ ತರಬೇತುದಾರರು, ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.