ಪೆರುವಾಜೆಯಲ್ಲಿ ಖ್ಯಾತ ಸಾಹಿತಿ ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಂಸ್ಕೃತಿಕ ಸಂಘ ಐಕ್ಯೂಏಸಿ ವಿಭಾಗ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇವರುಗಳ ಆಶ್ರಯದಲ್ಲಿ ಖ್ಯಾತ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮ ದಿನಾಚರಣೆ ಕಾರ್ಯಕ್ರಮ ಅ.10ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಾಮೋದರ ಕಣಜಾಲುರವರು ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ
“ಶಿವರಾಮ ಕಾರಂತರ ಬದುಕೇ ಯುವಜನರಿಗೆ ಸ್ಫೂರ್ತಿ.ಅವರು ನಿಷ್ಠುರವಾದಿ ನಿಲುವಿನ ಮೂಲಕ ಜೀವನ ಸಾಗಿಸಿ ಮಾದರಿಯಾದವರು” ಎಂದರು.
ಡಾ‌ಶಿವರಾಮ ಕಾರಂತರ ಬದುಕು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸುಬ್ರಹ್ಮಣ್ಯ.ಕೆ ರವರು “ವ್ಯಕ್ತಿ ಹೇಗೆ ಬದುಕಬೇಕೆಂಬುದನ್ನು ಸಾಧಿಸಿ ತೋರಿಸಿದವರು ಶಿವರಾಮ ಕಾರಂತರು.ವ್ಯಕ್ತಿ ಹೇಗೆ ಶಕ್ತಿಯಾಗಬಹುದು ಎಂಬುದಕ್ಕೆ ಅವರು ಅತ್ಯುತ್ತಮ ಉದಾಹರಣೆ.


ಪ್ರಯೋಗಶೀಲತೆಯ ಮೂಲಕ ಬದುಕಿದವರು‌.ಎಲ್ಲ ನೆಲೆಗಟ್ಟಿನಲ್ಲಿ ಕೆಲಸ ಮಾಡಿದ ಕಾರಂತರು ಬಾಳ್ವೆಯೇ ಬೆಳಕು ಎಂಬುದರ ಮೂಲಕ ಆದರ್ಶವಾದವರು.ಅವರ ಬರಹಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಅಪಾರ ಕೊಡುಗೆ ನೀಡಿವೆ.ಸಾಹಿತ್ಯದ ಜೊತೆಗೆ ನಿಷ್ಠುರ ಜೀವನದ ಮೂಲಕ ಮಾದರಿ ವ್ಯಕ್ತಿತ್ವ ಅವರದು” ಎಂದು ಕಾರಂತರನ್ನು ಬಣ್ಣಿಸಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲುರವರು ಸಭಾಧ್ಯಕ್ಷತೆ ವಹಿಸಿದ್ದರು.


ಸಾಂಸ್ಕೃತಿಕ ಸಂಘದ ಸಂಚಾಲಕರಾದ ಯತೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಹಾಗೂ ಚಂದ್ರಮತಿ,ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ ಸದಸ್ಯ ಸಂಕೀರ್ಣ ಚೊಕ್ಕಾಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.


ಶಿವರಾಮ ಕಾರಂತರ ಬದುಕು ಬರಹದ ಕುರಿತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕು.ನಿರೀಕ್ಷಾ ಸ್ವಾಗತಿಸಿ,ಕು.ಮನೀಷಾ ಧನ್ಯವಾದಗೈದರು.
ಕು.ಮಾನಸ ಕಾರ್ಯಕ್ರಮ ನಿರೂಪಿಸಿದರು.