ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದಅನುತ್ಪಾದಕ ತೆಂಗಿನ ಮರ ಖರೀದಿಯ `ಕಲ್ಪವಿಕಾಸ ಯೋಜನೆ’ ಜಾರಿಗೆ

0

ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ `ಕಲ್ಪವಿಕಾಸ’ ಯೋಜನೆಯನ್ನು ಪ್ರಾರಂಭಿಸಿದ್ದು, ತೆಂಗಿನ ಮರದ ಮೌಲ್ಯವರ್ಧನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗೋಸ್ಕರ ಈ ಯೋಜನೆ ಜಾರಿಗೊಳಿಸಲಾಗಿದೆ.ಈ ಯೋಜನೆಯಲ್ಲಿ ಅರ್ಹ ಅನುತ್ಪಾದಕ ತೆಂಗಿನ ಮರಗಳನ್ನು ಸಂಸ್ಥೆ ಗರಿಷ್ಟ ರೂ.೨ ಸಾವಿರದ ತನಕ ಪರಿಹಾರ ನೀಡಿ ಖರೀದಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ತೆಂಗು ಬೆಳೆಯು ಪ್ರಮುಖ ಸ್ಥಾನ ಪಡೆದಿದ್ದರೂ ನೈಸರ್ಗಿಕ ವಿಕೋಪಗಳು, ರೋಗಗಳು, ಆನೆಗಳ ದಾಳಿಯಿಂದ ಹಾನಿಗೊಳಗಾದ ತೆಂಗಿನ ಮರಗಳಿಗೆ ನ್ಯಾಯಯುತ ಪರಿಹಾರ ದೊರಕದೆ ರೈತರು ಕಂಗೆಟ್ಟಿದ್ದಾರೆ.ಈ ನಿಟ್ಟಿನಲ್ಲಿ ಕಲ್ಪವಿಕಾಸ ಯೋಜನೆಯನ್ನು ಪ್ರಾರಂಭಿಸಿದ್ದು, ಅನುತ್ಪಾದಕ ತೆಂಗಿನ ಮರಗಳನ್ನು ಖರೀದಿಸುವುದು ಮತ್ತು ಪುನರುಜ್ಜೀವನಕ್ಕೆ ಒತ್ತುಕೊಡುವುದು ಕಲ್ಪವಿಕಾಸ ಯೋಜನೆಯ ಒಂದು ಭಾಗವಾಗಿದೆ.ಮರ ಖರೀದಿಯ ಬಳಿಕ ಅವರಿಗೆ ಉಚಿತ ತೆಂಗಿನ ಸಸಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕ್ಯೂ ಆರ್ ಕೋಡ್ ಮೂಲಕ ಸಂಪರ್ಕ: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಅವರು ಮಾತನಾಡಿ ಅರ್ಹ ಅನುತ್ಪಾದಕ ತೆಂಗಿನ ಮರಗಳನ್ನು ಸಂಸ್ಥೆಯು ಕಲ್ಪವಿಕಾಸ ಯೋಜನೆಯಲ್ಲಿ ಖರೀದಿಸಿ ಮೌಲ್ಯವರ್ಧನೆಗೆ ತೀರ್ಮಾನಿಸಿದಂತೆ ಖರೀದಿಸಿದ ಮರಕ್ಕೆ ಗರಿಷ್ಠ ರೂ.೨ ಸಾವಿರ ಪರಿಹಾರ ನೀಡಲಾಗುವುದು.ಅದಕ್ಕೂ ಮೊದಲು ನಮ್ಮ ಕಡೆಯಿಂದ ಮರಗಳ ಸರ್ವೆ ಕಾರ್ಯ ನಡೆಯಲಿದೆ.ಮರಗಳನ್ನು ಕೊಡುವವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹದು ಅಥವಾ ನಮ್ಮ ಸಂಸ್ಥೆಯಲ್ಲಿ ಅದಕ್ಕೆ ಪ್ರತ್ಯೇಕ ಕ್ಯೂಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದು ನೇರವಾಗಿ ಅರ್ಜಿಯನ್ನು ತೆರೆಯುತ್ತದೆ. ಅಲ್ಲಿ ಮರದ ಸಂಪೂರ್ಣ ಮಾಹಿತಿ ಭರ್ತಿ ಮಾಡಬೇಕೆಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ಲತಾ, ಎನ್.ಜಿ.ಒ ಡಾ| ರಾಜೇಶ್ ಬೆಜ್ಜಂಗಳ, ಸಲಹೆಗಾರ ಕುಮಾರ್ ಪೆರ್ನಾಜೆ ಉಪಸ್ಥಿತರಿದ್ದರು.

ಪೀಠೋಪಕರಣಕ್ಕೆ ಬಳಕೆ
ಸದ್ಯದಲ್ಲೇ ಪುತ್ತೂರಲ್ಲಿ ಘಟಕ
ತೆಂಗಿನ ಮರದಿಂದ ವಿವಿಧ ಉತ್ಪನ್ನಗಳ ತಯಾರಿಕೆಗಳಿಗೆ ಅತೀ ಹೆಚ್ಚು ಬೇಡಿಕೆಯಿದೆ.ತೆಂಗಿನ ಮರ ಅತೀ ಗಟ್ಟಿಮುಟ್ಟಾಗಿದ್ದು,ಈಗಾಗಲೇ ಟೂತ್ ಬ್ರೆಶ್‌ಗೆ ಹೆಚ್ಚು ಬೇಡಿಕೆಯಿದೆ.ಒಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆಯಡಿಯಲ್ಲಿ ಮರದ ವಸ್ತುಗಳಿಗೆ ಆದ್ಯತೆ ನೀಡಲಾಗುತ್ತಿದೆ.ಇದರ ಜೊತೆಗೆ ವಿವಿಧ ಸ್ಮರಣಿಕೆಗಳ ತಯಾರಿಯೂ ಮಾಡಲಾಗುತ್ತಿದೆ.ಪೀಠೋಪಕರಣಗಳ ತಯಾರಿಕಾ ಘಟಕ ಸದ್ಯದಲ್ಲೇ ಪುತ್ತೂರಿನಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕುಸುಮಾಧರ್ ಅವರು ಹೇಳಿದರು.