ಮಗನ ಮದುವೆಯ ಆಮಂತ್ರಣ ಹಂಚಲು ತೆರಳುತ್ತಿದ್ದ ವೇಳೆ ಅಪಘಾತ

0


ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು ದುರ್ಮರಣ


ದುಗಲಡ್ಕ ಮತ್ತು ಸೋಣಂಗೇರಿಯ ಮಧ್ಯೆ ಸುತ್ತುಕೋಟೆ ಎಂಬಲ್ಲಿ ಸಂಭವಿಸಿದ ಬಸ್ ಮತ್ತು ಸ್ಕೂಟಿ ನಡುವಿನ ಅಪಘಾತದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.


ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿಯಾಗಿರುವ ರಾಮಚಂದ್ರ ಪ್ರಭು ಅವರ ಪುತ್ರನ ವಿವಾಹ ಸಮಾರಂಭ ಸೆಪ್ಟಂಬರ್‌ನಲ್ಲಿ ನಡೆಯಲಿದ್ದು, ರಾಮಚಂದ್ರ ಪ್ರಭುಗಳು ಆಮಂತ್ರಣ ವಿತರಣೆ ಕಾರ್ಯ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಪತ್ನಿ ಉಮಾವತಿಯವರೊಂದಿಗೆ ಪ್ರಭುಗಳು ಸುಳ್ಯದತ್ತ ಬರುತ್ತಿದ್ದಾಗ ದುಗಲಡ್ಕ ಬಳಿ ಬರುವಷ್ಟರಲ್ಲಿ ಮಳೆ ಬಂದಿತ್ತು. ಹೀಗಾಗಿ ಪತ್ನಿ ಉಮಾವತಿಯವರನ್ನು ಅಲ್ಲಿ ಇಳಿಸಿ ಬಸ್‌ನಲ್ಲಿ ಬರುವಂತೆ ತಿಳಿಸಿ ಅವರು ಸ್ಕೂಟಿಯಲ್ಲೇ ಸುಳ್ಯದತ್ತ ಬರುತ್ತಿದ್ದರು. ಮಿತ್ತಮಜಲಿನಲ್ಲಿ ಸ್ವಲ್ಪ ಹೊತ್ತು ನಿಂತು ಬಳಿಕ ಹೊರಟು ಬಂದು ಸುತ್ತುಕೋಟೆಗೆ ತಲುಪುವಷ್ಟರಲ್ಲಿ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಹೋಗುತ್ತಿದ್ದ ಸರಕಾರಿ ಬಸ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿತು. ತಲೆಗೆ ಗಂಭೀರವಾಗಿ ಗಾಯಗೊಂಡ ರಾಮಚಂದ್ರ ಪ್ರಭುಗಳು ಸ್ಥಳದಲ್ಲೇ ಮೃತಪಟ್ಟರು.


ಸುಳ್ಯದಿಂದ ಆಂಬ್ಯುಲೆನ್ಸ್ ಹೋದ ಬಳಿಕ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ರಾಮಚಂದ್ರ ಪ್ರಭುರವರು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿತ್ಯನಿಧಿ ಸಂಗ್ರಾಹಕರೂ ಆಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡು ಊರಿನಲ್ಲಿ ಜನಾನುರಾಗಿಯಾಗಿದ್ದರು. ಅವರ ಪತ್ನಿ ಉಮಾವತಿ ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪುತ್ರ ಸಂದೀಪ್ ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಉನ್ನತ ಅಧಿಕಾರಿಯಾಗಿದ್ದು, ಮತ್ತೋರ್ವ ಪುತ್ರ ಕೆಲವು ವರ್ಷದ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು.