ಮರ್ಕಂಜದ ವಿವಾಹಿತ ಮಹಿಳೆ ನಾಪತ್ತೆ ಹಿನ್ನೆಲೆ

0

ಸೆ.24ರ ಮಧ್ಯಾಹ್ನ ಮನೆಯಿಂದ ನಾಪತ್ತೆಯಾದ ಮರ್ಕಂಜ ಗ್ರಾಮದ ಮಿತ್ತಡ್ಕ ಮೋಹನರವರ ಪತ್ನಿ ಶೋಭಾಲತರವರ ಹುಡುಕಾಟ ನಡೆಯುತ್ತಿದ್ದು ಇದುವರೆಗೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು‌ ಅವರ ಮನೆಯ‌ ಬಾವಿಯಲ್ಲಿ ಹುಡುಕಾಟ ನಡೆಯಲಿದೆ. ಅದಕ್ಕಾಗಿ ಪೋಲೀಸರಿಗೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಶೋಭಾಲತಾರವರು ಕಾಣೆಯಾದ ಬಳಿಕ ಸಂಬಂಧಿಕರ ಮನೆ ಸೇರಿದಂತೆ ಊರಿನಲ್ಲಿಯೂ ಹುಡುಕಾಟ ನಡೆದಿದೆ. ಆದರೂ ಪತ್ತೆಯಾಗಲಿಲ್ಲ. ಹೀಗಾಗಿ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಸಂಪಾಜೆ ವಲಯದವರು ಬಂದು ಬಾವಿಯಲ್ಲಿ ಹುಡುಕಾಡುವುದಕ್ಕಾಗಿ ಬಾವಿಯ ನೀರನ್ನು ಖಾಲಿ‌ ಮಾಡತೊಡಗಿದರು. ಆಗ ಬಾವಿಯ ಸುತ್ತ ಮಣ್ಣು ಜರಿಯತೊಡಗಿತ್ತೆನ್ನಲಾಗಿದೆ. ಹೀಗಾಗಿ ಬಾವಿಯ ನೀರು ಖಾಲಿ ಮಾಡುವ ಪ್ರಕ್ರಿಯೆ ಕೈಬಿಟ್ಟರೆನ್ನಲಾಗಿದೆ.

ಅಲ್ಲದೇ ಪೈಚಾರ್ ನಿಂದ ಮುಳುಗು ತಜ್ಞರು ಬಂದರಾದರೂ ಬಾವಿ ಜರಿಯುತ್ತಿರುವುದರಿಂದ ಅವರು ನೀರಿಗೆ ಇಳಿಯಲಿಲ್ಲ. ಬಳಿಕ ಸುಳ್ಯದಿಂದ ಅಗ್ನಿಶಾಮಕ ದಳ‌ದವರು ಬಂದು ಕೊಕ್ಕೆ ಹಾಕಿ ಬಾವಿಯನ್ನು ಶೋಧಿಸಿದರು. ಆದರೆ ಅದರಲ್ಲಿ ಮೃತದೇಹ ಪತ್ತೆಯಾಗಿರಲಿಲ್ಲ. ಕಾಣೆಯಾದ ವ್ಯಕ್ತಿ ಬೇರೆಲ್ಲೂ‌ ಸಿಗದ ಕಾರಣ ಬಾವಿಯಲ್ಲಿ ಹುಡುಕುವಂತೆ ಪೋಲೀಸರಿಗೆ ಅವರ ಪತಿ‌ ಮೋಹನರವರು ಮನವಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳದವರು ಹುಡುಕಿದರೂ ಮಣ್ಣು‌ ಜರಿದಿರುವ ಕಾರಣ ಬಾವಿಯೊಳಗೆ ಮಣ್ಣಿನಡಿ ಸಿಲುಕಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪೋಲೀಸರ ಉಪಸ್ಥಿತಿಯಲ್ಲಿ ಹುಡುಕುವ ಕಾರ್ಯಾಚರಣೆ ನಡೆಯಬೇಕಿದೆ.