ಆರ್ಷ ಭಾರತ ಸಂಸ್ಕೃತಿಯ ಅನುಸರಣೆ : ಸಂಸದ ಉಣ್ಣಿತ್ತಾನ್ ಕರೆ
ಆರ್ಷ ಭಾರತ ಸಂಸ್ಕೃತಿಯು ಅನೇಕ ಧನಾತ್ಮಕ ಸಂಗತಿಗಳ ಸಂಕರವಾಗಿತ್ತು. ಆದರೆ ವರ್ತಮಾನದ ಕಾಲದಲ್ಲಿ ಅನೇಕ ಋಣಾತ್ಮಕ ಸಂಗತಿಗಳು ವಿಜೃಂಭಿಸುತ್ತಿದೆ. ಧಾರ್ಮಿಕ ಕೇಂದ್ರಗಳ ಮೂಲಕ, ದೇವ ದೈವ ಆರಾಧನೆಯ ಮೂಲಕ ಒಳ್ಳೆಯ ಬದುಕು ಕಂಡುಕೊಳ್ಳಬೇಕು
ಎಂದು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಹೇಳಿದರು.
ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ದೈವ, ಚಡೇಕ್ಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನ ಪುನಃಪ್ರತಿಷ್ಠಾ ಕಲಶೋತ್ಸವ ಹಾಗೂ ಕಳಿಯಾಟ ಮಹೋತ್ಸವದ ಅಂಗವಾಗಿ ನಡೆದ ಎ. 6 ರಂದು ನಡೆದ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಸಿ ಅವರು ಮಾತನಾಡಿದರು.
ಗೌರಿಕೆರೆಯ ಈ ಕ್ಷೇತ್ರ ನಿಜವಾದ ಅರ್ಥದಲ್ಲಿ ಜಾತ್ಯತೀತ ಕೇಂದ್ರವಾಗಿದೆ. ಜಾತಿ, ಮತ, ಬೇಧವಿಲ್ಲದೆ ಎಲ್ಲರಿಗೂ ಪ್ರವೇಶವಿರುವ ಧಾರ್ಮಿಕ ಸ್ಥಳ ಇದಾಗಿದೆ ಎಂದವರು ಹೇಳಿದರು.
ಕುತ್ತಿಕ್ಕೋಲು ಗ್ರಾಮ ಪಂಚಾಯತ್ ಅಧ್ಯಕ್ಷತೆ ಮುರಳಿ ಪಯ್ಯಂಗಾನಂ ಅಧ್ಯಕ್ಷತೆ ವಹಿಸಿದ್ದರು.
ಜ್ಯೋತಿಷಿ ಕೋಡೋತ್ ಸದಾನಂದರವರು ಧಾರ್ಮಿಕ ಉಪನ್ಯಾಸ ನೀಡಿದರು.
ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯ ಕೃಷ್ಣನ್ ಬಿ., ಕುತ್ತಿಕೋಲು ಗ್ರಾ.ಪಂ. ಸದಸ್ಯರಾದ ಕುಂಞಿರಾಮನ್ ತವನಂ, ಶ್ರೀಮತಿ ನಾರಾಯಣಿ, ಬಲರಾಮನ್ ನಂಬ್ಯಾರ್, ಸಾಮಾಜಿಕ ಧುರೀಣ ಉಮರ್ ಮಾಣಿಮೂಲೆ ಶುಭಾಸಂಸನೆಗೈದರು.
ಜ್ಯೋತಿಷಿ ಸದಾನಂದನ್ ಕೋಡೋತ್ , ವಿವಿಧ ಕ್ಷೇತ್ರದ ಸಾಧಕರಾದ ಯಶೋಧಾ, ಕುಸುಮ, ಸೌಮ್ಯ ನಾರಾಯಣನ್, ರಜನಿ, ವೇಣುಗೋಪಾಲ್ ಅವರನ್ನು ಅಭಿನಂದಿಸಲಾಯಿತು.
ತರವಾಡು ಯಜಮಾನ ದೇವು ಬಿ. , ರಕ್ಷಾಧಿಕಾರಿಗಳಾದ ಕೊರಗನ್, ಬಾಬು , ಉಕ್ರನ್, ಮೋಹನ್ ಬಿ.ಎಂ. ಉಪಸ್ಥಿತರಿದ್ದರು.
ಗಣೇಶ್ ಗೌರಿಕೆರೆ ಸ್ವಾಗತಿಸಿದರು. ಸದಾನಂದ ಗೌರಿಕೆರೆ ವಂದಿಸಿದರು.