ಅಮರಮುಡ್ನೂರು : ಮೈರ್ಪಳ್ಳದಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿದ ಯುವ ತೇಜಸ್ಸು

0

ಅಪಾಯದ ಪಾಲಕ್ಕೆ ಮುಕ್ತಿ ಹಾಡಿದ ಹತ್ತಾರು ಯುವ ಮನಸ್ಸು

ಅಮರಮುಡ್ನೂರು ಗ್ರಾಮದ ಮೃರ್ಪಳ್ಳ ಎಂಬಲ್ಲಿ ಅಪಾಯದ ಅಡಿಕೆ ಮರದ ಪಾಲಕ್ಕೆ ಯುವ ತೇಜಸ್ಸು ತಂಡ ಕಬ್ಬಿಣದ ಸೇತುವೆ ನಿರ್ಮಿಸಿ ಗ್ರಾಮೀಣ ಭಾಗದ ಜನರಿಗೆ ನೆರವಾಗಿದೆ.

ಸೋಣಂಗೇರಿ ಗುತ್ತಿಗಾರು ರಸ್ತೆಯ ದೊಡ್ಡತೋಟದಿಂದ ಮುಂದೆ ಗುಂಡಿಯಂಗಡಿ ಎಂಬಲ್ಲಿಗೆ ಪೈಲಾರು ಮೈರ್ಪಳ್ಳ ಕಡೆಯಿಂದ ಸಂಪರ್ಕಿಸಲು ಪಂಚಾಯತ್ ದಾರಿಯಿದೆ. ಈ ದಾರಿಯಲ್ಲಿ ದಿನನಿತ್ಯ ಹತ್ತಾರು ಜನ ಸಂಚರಿಸುತ್ತಾರೆ. ಆದರೆ ಈ ದಾರಿಯ ಮಧ್ಯೆ ತೋಡೊಂದು ಹರಿಯಿತ್ತಿದ್ದು, ಮಳೆಗಾಲದ ಸಂದರ್ಭ ಭಾರೀ ನೀರು ಬರುವ ಕಾರಣ ತೋಡನ್ನು ದಾಟಲು‌ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅಡಿಕೆ ಮರದ ಪಾಲವನ್ನೇ ಆಶ್ರಯಿಸುತ್ತಿದ್ದರು. ಆದರೆ ಇದರಲ್ಲಿ ಕೂಡಾ ಅಪಾಯದಲ್ಲಿ ದಾಟಬೇಕಾದ ಅನಿವಾರ್ಯತೆ ಇತ್ತು. ಮಳೆಗಾಲದಲ್ಲಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆಯೂ ಇತ್ತು. ಮರದ ಪಾಲಗಳು ಮಳೆಗಾಲದಲ್ಲಿ
ಅನೇಕ ಕಡೆಗಳಲ್ಲಿ ಕೊಚ್ಚಿ ಹೋಗುವ ಘಟನೆಗಳು ನಡೆಯುತ್ತಿತ್ತು.

ಈ ವಿಚಾರ ಯುವ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಯುವಕರ ತಂಡ ಯುವ ತೇಜಸ್ಸು ಟ್ರಸ್ಟ್ ನ ಗಮನಕ್ಕೆ ಬಂದು ಅವರು ಅಲ್ಲೊಂದು ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಮುಂದಾದರು.

ಮಳೆಗಾಲದಲ್ಲಿ ತೋಡು, ಹೊಳೆಗಳನ್ನು ದಾಟಲು ಸುಳ್ಯ ಸೇರಿದಂತೆ ಜಿಲ್ಲೆಯ ಹಲವಾರು ಗ್ರಾಮಗಳ ಜನರಿಗೆ ಅನೇಕ ಕಡೆಗಳಲ್ಲಿ ಇಂದಿಗೂ ಅಡಿಕೆ ಮರದ ಅಥವಾ ಮರದ‌ ಕಾಲು ಸೇತುವೆಗಳೇ ಆಶ್ರಯ. ಇದಕ್ಕೆ ಮುಕ್ತಿ ನೀಡಿ ಸುಸಜ್ಜಿತ ಕಬ್ಬಿಣದ ಕಾಲು ಸಂಕಗಳನ್ನು ನಿರ್ಮಿಸಿ ಗ್ರಾಮೀಣ ಜನರ ಬದುಕಿನಲ್ಲಿ ಮಂದಹಾಸ ಮೂಡಿಸಬೇಕು ಎಂಬ ದೃಷ್ಠಿಯಲ್ಲಿ ಯುವ ತೇಜಸ್ಸು ಟ್ರಸ್ಟ್‌ನ ಯುವ ಮನಸ್ಸುಗಳು ಈ ಹೊಸ ಆಶಯವನ್ನು ಮುಂದಿಟ್ಟು ಕಾರ್ಯ ಪ್ರವೃತ್ತವಾಯಿತು. ಇದೀಗ ನಾರ್ಣಕಜೆಯಲ್ಲಿ ಅಡಿಕೆ ಮರದ ಪಾಲದ ಬದಲು ಕಬ್ಬಿಣದ ಸುಸಜ್ಜಿತ ಕಾಲು ಸೇತುವೆಯನ್ನು ಯುವ ತೇಜಸ್ಸು ತಂಡದವರು ಮೇ.27ರಂದು ಅಳವಡಿಸಿದ್ದಾರೆ.

ಯುವ ತೇಜಸ್ಸು ಟ್ರಸ್ಟ್ ನ ನೇತೃತ್ವದಲ್ಲಿ ಸುಮೂರು ಮೂವತ್ತಕ್ಕೂ ಹೆಚ್ಚು ಮಂದಿ ಯುವಕರು ಶ್ರಮದಾನದ ಮೂಲಕ ಕಾಲು ಸೇತುವೆ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೈರ್ಪಳ್ಳದಲ್ಲಿ ಈ ತಂಡದವರು ನಿರ್ಮಿಸಿದ ಸೇತುವೆ ಇದಕ್ಕೆ ಸಾಕ್ಷಿಯಾಗಿ ನಿಂತಿದೆ.

ಅನೇಕ ಕಡೆಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಮರದ, ಬಿದಿರಿನ, ಅಡಿಕೆಯ ಪಾಲಗಳು ಕೊಚ್ಚಿ ಹೋಗಿ ಜನರು ಹಲವು ದಿನ ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದು ಕೊಂಡ ಘಟನೆಗಳು ನಡೆದಿತ್ತು. ಅದು ಭಾರೀ ದೊಡ್ಡ ಸುದ್ದಿಯೂ ಆಗಿತ್ತು. ಆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಕಬ್ಬಿಣದ‌‌ ಸೇತುವೆ ನಿರ್ಮಿಸುವ ಮೂಲಕ ಗ್ರಾಮೀಣ ಜನರ ಹೃದಯ ಬೆಸೆಯಬೇಕೆಂಬ ಉದ್ದೇಶವನ್ನು ಹೊತ್ತ ಯುವ ತೇಜಸ್ಸು ತಂಡ ಸೇತುವೆ ನಿರ್ಮಾಣದ ನಿರ್ಧಾರಕ್ಕೆ ಬಂದಿತ್ತು. ಈಗಾಗಲೇ ಕೆಲವು ಕಡೆಗಳಲ್ಲಿ ಕಾಲು ಸಂಕ ನಿರ್ಮಿಸಿಯೂ ಕೊಟ್ಟಿದ್ದಾರೆ.

ಕಾಲು ಸಂಕದ ಅಗತ್ಯ ಇದ್ದರೆ ಮತ್ತು ಈ ಸೇವಾ ಕಾರ್ಯದಲ್ಲಿ ಆರ್ಥಿಕವಾಗಿ ಮತ್ತು ಇತರ ಸಹಕಾರ ನೀಡಲು ಬಯಸುವವರು
94801 77770 ಸಂಖ್ಯೆಗೆ ಕರೆ ಮಾಡಬಹುದಾಗಿದೆ.