ಜಾಲ್ಸೂರು – ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಬಿರುಕು

0

ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ – ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ

ಜಾಲ್ಸೂರು -ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ಬೇರ್ಪಡ್ಕ ಎಂಬಲ್ಲಿ ರಸ್ತೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದ್ದು, ಈ ರಸ್ತೆಯ ಬದಿಯಲ್ಲಿ ತಡೆಗೋಡೆಯನ್ನು ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಜಾಲ್ಸೂರಿನಿಂದ ಸೋಣಂಗೇರಿ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಬೇರ್ಪಡ್ಕ ಎಂಬಲ್ಲಿರುವ ತಿರುವಿನ ಬಳಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ರಸ್ತೆಯ ಬದಿಯಲ್ಲಿ ತಡೆಗೋಡೆಯೂ ಇಲ್ಲದೇ ಇರುವುದರಿಂದ ಸಂಬಂಧಪಟ್ಟವರು ಇದರತ್ತ ಗಮನ ಹರಿಸಬೇಕಾಗಿದೆ.

ಕೇರಳ ಮತ್ತಿತರ ಭಾಗದಿಂದ ಬರುವ ಭಕ್ತಾದಿಗಳಿಗೆ ಜಾಲ್ಸೂರು ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆ ಇದಾಗಿದ್ದು, ನಿರಂತರವಾಗಿ ಮಳೆ ಸುರಿದರೆ ಬಿರುಕು ಹೆಚ್ಚಾಗಿ ರಸ್ತೆ ಸಂಪರ್ಕವೇ ಕಡಿತಗೊಳ್ಳುವ ಭೀತಿ ನಿರ್ಮಾಣವಾಗಿದೆ.