ಯಕ್ಷಗಾನ ಕಲಾವಿದರಾಗಿದ್ದ ಸಬ್ಬಣಕೋಡಿ ಕೃಷ್ಣ ಭಟ್ ನಿಧನ

0


ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಸಬ್ಬಣಕೋಡಿ ಕೃಷ್ಣ ಭಟ್ ಅವರು ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಸುಳ್ಯ ಬಸ್‌ನಿಲ್ದಾಣದ ಸಮೀಪವಿರುವ ಬಿಲ್ಡಿಂಗ್ ಎದುರುಗಡೆ ಮಲಗಿದ್ದ ಅವರು ಇಂದು ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರು.

ವಿಷಯ ತಿಳಿದ ಬಿಲ್ಡಿಂಗ್ ಮಾಲಕ ಎಸ್.ಆರ್.ಸೂರಯ್ಯರವರು ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ ಅವರಿಗೆ ಮಾಹಿತಿ ನೀಡಿದರು. ಅವರು ಬಂದು ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ವೈದ್ಯರು ಸಾವು ದೃಢಪಡಿಸಿದರು.


ಪುತ್ತೂರು ತಾಲೂಕಿನ ಕಬಕ ಸಮೀಪದ ಸಬ್ಬಣಕೋಡಿಯವರಾದ ಕೃಷ್ಣ ಭಟ್‌ರವರು ಒಂದು ಕಾಲದಲ್ಲಿ ಹೆಸರಾಂತ ಕಲಾವಿದರಾಗಿದ್ದು, ನೃತ್ಯ ಗುರುಗಳಾಗಿಯೂ ನೂರಾರು ಶಿಷ್ಯರಿಗೆ ಯಕ್ಷ ಶಿಕ್ಷಣ ನೀಡಿದ್ದರು. ಸುಳ್ಯದ ಯುವಕ ಯಕ್ಷಗಾನ ವೃಂದದಲ್ಲಿ ಸಕ್ರಿಯರಾಗಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಕುಡಿತದ ಚಟ ಹೊಂದಿದ ಕಾರಣ ಸಕ್ರಿಯ ಕಲಾ ಬದುಕು ಸಾಧ್ಯವಾಗದೆ ಸುಳ್ಯದಲ್ಲಿ ತಿರುಗಾಡಿಕೊಂಡಿದ್ದರು. ಈ ಮಧ್ಯೆ ಬ್ಯಾನರ್ ಬರೆಯುವ ಕಾರ್ಯವನ್ನೂ ಮಾಡುತ್ತಿದ್ದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು.


ಪತ್ನಿ ಉಷಾ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರರಾದ ಸಬ್ಬಣಕೋಡಿ ರಾಮಭಟ್, ಸಹೋದರಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ವಿಟ್ಲದಲ್ಲಿರುವ ಮಗಳ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.