ಸುಳ್ಯ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

ಕೊಡಿಯಾಲಬೈಲು ಸರಕಾರಿ ಶಾಲೆ ದತ್ತು ಸ್ವೀಕಾರ- ಸರಕಾರಿ ಇಲಾಖೆಗಳ ಸವಲತ್ತು ಜನರಿಗೆ ತಲುಪಿಸಲು ಯೋಜನೆ

0

ಸುಳ್ಯ ಲಯನ್ಸ್ ಕ್ಲಬ್ ನ 2023-24 ನೇ ಸಾಲಿನ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿಯವರ ತಂಡದ ಪದಗ್ರಹಣ ಸಮಾರಂಭವು ಜು.1ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಲಯನ್ಸ್ ಎರಡನೇ ಜಿಲ್ಲಾ ಉಪ ಗವರ್ನರ್ ಕುಡ್ಪಿ ಅರವಿಂದ ಶೆಣೈ ಪದಗ್ರಹಣ ನೆರವೇರಿಸಿದರು.

ಸಭೆ ಲಯನ್ಸ್ ಅಧ್ಯಕ್ಷೆ ಶ್ರೀಮತಿ ರೂಪಾ ಜೆ ರೈಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ನೂತನ ಪದಾಧಿಕಾರಿಗಳ ಪದ ಪ್ರದಾನದ ಬಳಿಕ ನೂತನ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು.ಪದಗ್ರಹಣ ಸ್ವೀಕರಿಸಿದ ಬಳಿಕ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ರವರು ನನ್ನ ಒಂದು ವರ್ಷದ ಅವಧಿಯಲ್ಲಿ ಲಯನ್ಸ್ ಸಂಸ್ಥೆ ನೀಡುವ ಪ್ರಾಜೆಕ್ಟ್ ಜತೆಗೆ ಸಮಾಜಮುಖಿ ಕಾರ್ಯಕ್ರಮ ಮಾಡಲು ಚಿಂತನೆ ಹಮ್ಮಿಕೊಳ್ಳಲಾಗಿದೆ.

ಉಬರಡ್ಕ ಗ್ರಾಮದ ಕೊಡಿಯಾಲಬೈಲು ಕಿ.ಪ್ರಾ.ಶಾಲೆಯ ಎರಡೂವರೆ ಎಕರೆ ಜಾಗದಲ್ಲಿ ಅಡಿಕೆ ತೋಟ ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು 4 ವರ್ಷಗಳ ಕಾಲ , ಎಸ್.ಡಿ.ಎಂ.ಸಿ., ಯುವಕ ಮಂಡಲ ಹಾಗೂ ಊರವರ ಸಹಕಾರದೊಂದಿಗೆ ನಿರ್ವಹಣೆ ಮಾಡಲಿವೆ. ಸರಕಾರಿ ಇಲಾಖೆಯಲ್ಲಿರುವ 14 ಇಲಾಖೆಗಳ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕೊಂಡಿಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಮುಖ್ಯ ಅತಿಥಿಗಳಾಗಿದ್ದರು.


ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ, ವಲಯಾಧ್ಯಕ್ಷ ಸಂತೋಷ್ ಜಾಕೆ, ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ಡಾ.ಲಕ್ಷ್ಮೀಶ್ ಕೆ.ಎಸ್. ವೇದಿಕೆಯಲ್ಲಿದ್ದರು. ನಿರ್ಗಮಿತ ಅಧ್ಯಕ್ಷೆ ರೂಪಾ ಜೆ ರೈ, ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ಡಾ. ಲಕ್ಷ್ಮೀಶ್, ಪದಗ್ರಹಣಾಧಿಕಾರಿ ಕುಡ್ಪಿ ಅರವಿಂದ ಶೆಣೈ, ನಿವೃತ್ತ ಮುಖ್ಯ ಶಿಕ್ಷಕಿ ಪದ್ಮ ರಂಗನಾಥರನ್ನು ಹಾಗೂ ಕೊಡುಗೆ ನೀಡಿದ ಲಯನ್ಸ್ ಪದಾಧಿಕಾರಿಗಳನ್ನು ಗೌರವಿಸಲಾಯಿತು.


ವಿದ್ಯಾಭ್ಯಾಸಕ್ಕೆ ದತ್ತು ಸ್ವೀಕಾರ
ಮರ್ಕಂಜದ ಬಡ ವಿದ್ಯಾರ್ಥಿನಿಗೆ ಇಂಜಿನಿಯರಿಂಗ್ ಓದಿಸಲು ಸುಳ್ಯ ಲಯನ್ಸ್ ಕ್ಲಬ್ ದತ್ತು ಸ್ವೀಕಾರ ಮಾಡಿದೆ. ಆಕೆಯ 4 ವರ್ಷದ ವಿದ್ಯಾಭ್ಯಾಸದ ವೆಚ್ಚವನ್ನು ಲಯನ್ಸ್ ರೀಟಾ ಹಾಗೂ ಕರಂಬಯ್ಯರು ನೀಡಲಿದ್ದಾರೆ. ಮೊದಲ ಚೆಕ್ ಅನ್ನು ಸಮಾರಂಭದಲ್ಲಿ ಹಸ್ತಾಂತರ ಮಾಡಲಾಯಿತು.
ಎರಡು ಬಡ ಕುಟುಂಬದ ಮನೆ ಕಟ್ಟಲು ಸಹಾಯಧನ ಹಸ್ತಾಂತರ ಮಾಡಲಾಯಿತು. ಸುಳ್ಯದ ಸೈಂಟ್ ಜೋಸೆಫ್ ಹಾಗೂ ಆಲೆಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ಅಗತ್ಯ ಸಾಮಾಗ್ರಿ ಖರೀದಿಗೆ ಸಹಾಯ, ಸುಳ್ಯದ ಸಾಂದೀಪ್ ಶಾಲೆಯ ಮಕ್ಕಳ ಪೋಷಣೆಗೆ ಸಹಾಯ, ಉಬರಡ್ಕದ ಲಕ್ಷ್ಮೀ ಎಂಬ ಮಹಿಳೆಗೆ ವೀಲ್ ಚಯರ್ ಕೊಡುಗೆ ಸಮಾರಂಭದಲ್ಲಿ ಮಾಡಲಾಯಿತು. ಪಲಾನುಭವಿಗಳು ಹಾಗೂ ಆಯಾ ಶಾಲೆಗಳ ಮುಖ್ಯಸ್ಥರು ಬಂದು ಕೊಡುಗೆಗಳನ್ನು ಸ್ವೀಕಾರ ಮಾಡಿದರು.

ಲಯನ್ಸ್ ಕ್ಲಬ್ ಗೆ ಹೊಸದಾಗಿ ಸೇರ್ಪಡೆಗೊಂಡ ನಿವೃತ್ತ ಪ್ರಾಂಶುಪಾಲ ಮನಮೋಹನ ಮುಡೂರು, ಸುಳ್ಯ ತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್ ಎನ್., ಶಿಕ್ಷಕಿ ಶ್ರೀಮತಿ ಕಲಾವತಿ ಯವರನ್ನು ಉದ್ಯಮಿ ಎಸ್. ಆರ್.ಸೂರಯ್ಯ ಸಭೆಗೆ ಪರಿಚಯಿಸಿದರು.
ಶ್ರೀಮತಿ ತೇಜಸ್ವಿನಿ ಕಿರಣ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳನ್ನು ಜಯರಾಮ ದೇರಪ್ಪಜ್ಜನಮನೆ ಪರಿಚಯಿಸಿದರು.
ಶ್ರೀಮತಿ ರೀಟಾ ಕರಂಬಯ್ಯ ಹಾಗೂ ಶ್ರೀಮತಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ವಂದಿಸಿದರು.